ಅಷ್ಟೇ ಅಲ್ಲ. ಬರುಬರುತ್ತಾ ಶಿವರಾಮಕೃಷ್ಣರೆದುರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದೇ ಪ್ರತಿಷ್ಠೆಯ ವಿಷಯವಾಯಿತು. ತಮ್ಮ ಪಾಂಡಿತ್ಯ ಪ್ರದರ್ಶನ ಮಾಡಿ ಪ್ರಶಸ್ತಿಗಳನ್ನು ಪಡೆಯಲು ಪಂಡಿತರು ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಆದರೇನಂತೆ ಶಿವರಾಮಕೃಷ್ಣರ ಪಾಂಡಿತ್ಯದೆದುರು ಯಾರೂ ಸಮರ್ಥವಾಗಿ ವಾದ ಮಂಡಿಸಲು ಸಾಧ್ಯವಾಗುತ್ತಿರಲಿಲ್ಲ. ಸೋತವರಿಗೆಲ್ಲಾ ಶಿವರಾಮಕೃಷ್ಣರು ನಿಗದಿಪಡಿಸುತ್ತಿದ್ದ ವೇತನ (ಅಥವಾ ನಗದು)ವಷ್ಟೇ ಗಟ್ಟಿ. ಸಾಮಾನ್ಯವಾಗಿ ಅತಿ ಬುದ್ಧಿವಂತನ ವಿರುದ್ಧ ಉಳಿದವರು ತಿರುಗಿಬೀಳುವಂತೆ ಶಿವರಾಮಕೃಷ್ಣರ ಪ್ರಕರಣದಲ್ಲಿಯೂ ಆಯಿತು. " ಶಿವರಾಮಕೃಷ್ಣರಿಗೆ ಅವರ ಪಾಂಡಿತ್ಯದ ಬಗ್ಗೆ ಅಹಂಕಾರವಿದೆ, ಅವರ ಸಾಧನೆ ಮುಂದಿನ ಹಂತಕ್ಕೆ ಹೋಗಬೇಕೆಂದರೆ ಇದರಿಂದ ಹೊರತರಬೇಕು ಎಂದು ಪಾಂಡಿತ್ಯದ ಬಿಸಿಯನ್ನು ತಡೆಯಲಾಗದವರು ಪರಮ ಶಿವೇಂದ್ರರ ಬಳಿ ಉಸುರಿದರು. ಶಿವರಾಮಕೃಷ್ಣರನ್ನುದ್ದೇಶಿಸಿ "ವಾದದಲ್ಲಿ ಬೇರೆಯವರನ್ನು ಮೌನಿಯಾಗಿಸುವುದು ಹೇಗೆ ಎಂಬುದು ನಿನಗೆ ಚೆನ್ನಾಗಿಯೇ ತಿಳಿದಿದೆ, ಆದರೆ ನೀನು ಮೌನಿಯಾಗಿ ಜ್ಞಾನಕ್ಕೆ ಪ್ರಯತ್ನಿಸುವುದು, ಸಾಕ್ಷಾತ್ಕಾರ ಪಡೆಯುವುದು ಯಾವಾಗ? ಇನ್ನೂ ಎಷ್ಟು ಅಂತ ವಾದ ಮಾಡುತ್ತೀಯ"? ಎಂದಿದ್ದರಂತೆ ಪರಮಶಿವೇಂದ್ರರರು. ಆ ಘಟನೆಯೇ ವಾಚಾಳಿಯಾಗಿದ್ದ ಶಿವರಾಮಕೃಷ್ಣರನ್ನು ಅಂತರ್ಮುಖಿ, ಮೌನಿ ಸದಾಶಿವ ಬ್ರಹ್ಮೇಂದ್ರರನ್ನಾಗಿ ಮಾಡಿದ್ದು. ಬ್ರಹ್ಮಜ್ಞಾನ ಪಡೆಯುವ ಹಾದಿಯನ್ನು ತೋರಿದ್ದು. ಗುರುವಿನ ಕೃಪೆಯ ನಂತರ ಶಿವರಾಮಕೃಷ್ಣ ಮತ್ತೆಂದೂ ಮಾತನಾಡಲಿಲ್ಲ. ಹುಟ್ಟುವಾಗ ಕಾಮ ಕ್ರೋಧಗಳಿರಲಿಲ್ಲ, ಲೋಭ, ಮತ್ಸರಗ, ಮದಗಳಿರಲಿಲ್ಲ. ವೇದ-ಶಾಸ್ತ್ರಜ್ಞಾನಗಳನ್ನು ಕಲಿತದ್ದರಿಂದ ಜೊತೆ ಬಂದದ್ದು ಒಂದೇ, ಅದು ವಾದದ ಹುಚ್ಚು... ಆದೂ ಬಿಟ್ಟ ನಂತರ ಏನು ತಾನೆ ಉಳಿದೀತು?