ಲೇಖಕರು: ಪ್ರಕಾಶ್ ಶರ್ಮ
ಇಮೇಲ್ ವಿಳಾಸ: govindakanda@gmail.com
ಆದಿಶಕ್ತಿ ಶ್ರೀಲಲಿತೆಯ ರೂಪಗಳು ಅಸಂಖ್ಯ. ಜ್ಞಾನಮಾತೆ, ವೀಣಾಪಾಣಿ ಮಹಾಸರಸ್ವತಿಯ ರೂಪ ಅದರಲ್ಲಿ ಪ್ರಮುಖವಾದುದು. ನವರಾತ್ರಿಯ ಸಂದರ್ಭದಲ್ಲಿ ಶಾರದಾ ಪೂಜೆಗೆ ವಿಶೇಷ ಮಹತ್ವ.
ಅಶ್ವಯುಜ ಮಾಸ ಶುಕ್ಲಪಕ್ಷ ಪಾಡ್ಯದಿಂದ ದುರ್ಗಾರಾಧನೆ, ನವರಾತ್ರಿ ಉತ್ಸವ ಆರಂಭವಾದರೆ ಸಪ್ತಮಿಯಿಂದ ಶಾರದಾ ಪೂಜೆ ಆರಂಭವಾಗಿ ದಶಮಿಯಂದು ಸಮಾಪ್ತಿಯಾಗುತ್ತದೆ. ಸಮಸ್ತ ಬ್ರಹ್ಮಾಂಡದ ಜ್ಞಾನಸಂಪನ್ನೆಯಾದ ಸರಸ್ವತಿಯನ್ನು ಜ್ಞಾನವನ್ನು, ವಿದ್ಯೆಯನ್ನು ಅನುಗ್ರಹಿಸೆಂದು ಪ್ರಾರ್ಥಿಸುವುದು. ವಿದ್ಯೆಯಿಲ್ಲದೇ, ಜ್ಞಾನವಿಲ್ಲದೇ ಯಾವುದೇ ಕಾರ್ಯವೂ ಅಪೂರ್ಣ. ವಿದ್ಯಾ ವಿಹೀನಂ ಪಶುಸಮಾನಂ ಎಂಬಂತೆ ವಿದ್ಯೆಗಾಗಿ ಅನವರತ ತುಡಿಯಬೇಕು, ಶ್ರಮಿಸಬೇಕು.
ಅಂಕುಶಂ ಚಾಕ್ಷ ಸೂತ್ರಂ ಚ ಪಾಶಪುಸ್ತಕಧಾರಿಣೀಂ |
ಮುಕ್ತಾಹಾರೈಃ ಸಮಾಯುಕ್ತಾಂ ದೇವೀಂ ಧ್ಯಾಯೇ ಚತುರ್ಭುಜಾಂ ||
ಗ್ರಂಥಗಳು ಜ್ಞಾನಸ್ವರೂಪ. ಹಾಗಾಗಿಯೇ ಶಾರದಾ ಪೂಜೆಯಂದು ಪುಸ್ತಕಗಳಿಗೆ, ಗ್ರಂಥಗಳಿಗೆ ವಿಶೇಷ ಪೂಜೆ. ಅಂಧಕಾರವನ್ನು ನಿವಾರಿಸಿ ಜ್ಞಾನಜ್ಯೋತಿಯನ್ನು ಬೆಳಗುವವಳು ಶಾರದೆ.
ಶ್ರೀಲಲಿತೆ-ಭಂಡಾಸುರ ನಡುವಿನ ಯುದ್ಧದ ಸಂದರ್ಭ. ಭಂಡಾಸುರನ ಅಸ್ತ್ರಗಳೆಲ್ಲವೂ ಶ್ರೀಲಲಿತೆಯ ಸೈನ್ಯದ ಮಂತ್ರೋಚ್ಚಾರಣೆಯ ಓಘಕ್ಕೆ ನಾಶವಾಗುತ್ತಿರುತ್ತವೆ. ಮಂತ್ರದ ಧ್ವನಿತರಂಗಗಳು ಇದ್ದರಲ್ಲವೇ ಎಂದು ಭಂಡಾಸುರ ಮೂಕಾಸ್ತ್ರ ಪ್ರಯೋಗಿಸಿ ಸಮಸ್ತ ಬ್ರಹ್ಮಾಂಡದ ಧ್ವನಿಯನ್ನೇ ಉಡುಗಿಸುತ್ತಾನೆ. ಅಂಥ ಸಂದರ್ಭದಲ್ಲಿ ಶ್ರೀಲಲಿತೆಯು ಸರಸ್ವತಿಯನ್ನು ಆವಾಹಿಸಿ ವಾಗ್ವಾದಿನೀ ಅಸ್ತ್ರ ಪ್ರಯೋಗಿಸುವಂತೆ ಸೂಚಿಸುತ್ತಾಳೆ. ಶಾರದೆಯ ವೀಣೆಯಿಂದ ಹೊಮ್ಮಿದ ಸಪ್ತಸ್ವರಗಳ ಧ್ವನಿತರಂಗಗಳು ಮೂಕಾಸ್ತ್ರವನ್ನು ಶಿಥಿಲಗೊಳಿಸಿ ನಾಶಮಾಡುತ್ತವೆ. ಜಗದ ಸಂಕಟ ವಾಗ್ವಾದಿನೀ ಅಸ್ತ್ರದಿಂದ ನಿವಾರಣೆಯಾಗುತ್ತದೆ.
ಹಾಗಿದ್ದರೆ ವಿದ್ಯೆ, ಅವಿದ್ಯೆಗಳು ಯಾವುವು? ಕೇನೋಪನಿಷತ್ತು ಹೇಳುತ್ತದೆ.... ಪ್ರತಿ ಶರೀರವೂ ಸ್ತ್ರೀ, ಪುರುಷ ಭಾಗಗಳ ಸಂಯೋಗದಿಂದ ಆದದ್ದು... ಪಂಚೇಂದ್ರಿಯಾದಿಯಾಗಿ ಪೂರ್ಣ ಕಾಯವು ಅಹಸ್ ಎಂಬ ಸ್ತ್ರೀರೂಪ, ಮನಸ್ಸು, ಬುದ್ಧಿ, ಆತ್ಮ ಹೇಳುವಂಥದ್ದು ಪುರುಷ ರೂಪ... ಬ್ರಹ್ಮಾಂಡ ಯಾ ಪರಬ್ರಹ್ಮ ಸ್ವರೂಪವನ್ನು ಪರಿಗಣಿಸಿದರೆ....
ನಾವು ಉಪಾಸನೆ ಮಾಡುವ ಸತ್ಯದೇವತೆಗಳೆಲ್ಲವೂ ಸ್ತ್ರೀ ಭಾಗವಾದ ಸತ್ಯ ಅಷ್ಟೇ.... ಪುರುಷ ಭಾಗವಾದ ಋತದ ಸಾಕ್ಷಾತ್ಕಾರ ಆಗಬೇಕಾದರೆ ಮನಸ್ಸು, ಆತ್ಮದಿಂದ ಉಪಾಸನೆ ಮಾಡಬೇಕು.... ಮನನವೇ ಉಪಾಸನೆ ಎನ್ನುತ್ತದೆ....
ಪ್ರತಿಬೋಧ ವಿದಿತಂ ಮತಮಮೃತತ್ವಂ ಹಿ ವಿಂದತೇ
ಆತ್ಮನಾ ವಿಂದತೇ ವೀರ್ಯಂ ವಿದ್ಯಯಾ ವಿಂದತೇ$ಮೃತಂ ||
ವಿದ್ಯೆಯನ್ನು ಮನನ ಮಾಡಬೇಕು ಎನ್ನುತ್ತದೆ.... ಇದಕ್ಕೂ ವ್ಯಾಖ್ಯಾನ ಇದೆ...
ವಿದ್ಯೆ ಎಂದರೆ ಪುರುಷ ಭಾಗವಾದ ಋತದ ಜ್ಞಾನ, ಅವಿದ್ಯೆ ಎಂದರೆ ಸ್ತ್ರೀ ಭಾಗವಾದ ಸತ್ಯದ ಜ್ಞಾನ....
ಅವಿದ್ಯಯಾ ಮೃತ್ಯುಂ ತೀರ್ತ್ವಾ,
ವಿದ್ಯಯಾ$ಮೃತಮಶ್ನುತೇ
ಶರೀರ ಎಂಬ ಸ್ತ್ರೀಯ ಮೂಲಕ ದೇವರ ಉಪಾಸನೆ ಮಾಡಿದರೆ ಬ್ರಹ್ಮ ಸಾಕ್ಷಾತ್ಕಾರ ಆಗುವುದಿಲ್ಲ.... ಮನಸ್ಸು ಅಥವಾ ಅಂತರಾತ್ಮ ಎಂಬ ಪುರುಷ ಉಪಾಸನೆ ಮಾಡಬೇಕು, ಆಗ ಬ್ರಹ್ಮಸಾಕ್ಷಾತ್ಕಾರ ಸಾಧ್ಯ.
ವಿದ್ಯೆ, ಅವಿದ್ಯೆ ಎರಡೂ ಬೇರೆಯೇ ಆಗಿದ್ದು, ಪರಸ್ಪರ ವಿರುದ್ಧವಾದುದು. ವಿದ್ಯೆ ಎಂದರೆ ಬ್ರಹ್ಮವಿದ್ಯೆ ಮಾತ್ರ. ಮತ್ತೆ ಉಳಿದದ್ದು ನಾವು ಏನೆಲ್ಲ ಕಲಿಯುತ್ತೇವೆಯೋ ಅವೆಲ್ಲ ಅವಿದ್ಯೆಯೇ.
ಪ್ರಜ್ಞಾನ ಹೇಳುವಂಥ ಜೀವಾಂಶನಲ್ಲಿ ಏಳುವ ಬಯಕೆಗಳು 2 ಬಗೆಯಾದವು.
1) ಪ್ರೇಯಸ್ಸು
2) ಶ್ರೇಯಸ್ಸು
ಅವಿದ್ಯೆಯಿಂದ ಪ್ರೇಯಸ್ಸು ಗಳಿಸುವುದಕ್ಕೆ ಮಾತ್ರ ಸಾಧ್ಯ. ಶ್ರೇಯಸ್ಸು ಪಡೆಯಬೇಕಾದರೆ ಬ್ರಹ್ಮಜ್ಞಾನ ತಿಳಿದುಕೊಳ್ಳುವ ವಿದ್ಯೆಬೇಕು. ಇದನ್ನು ಪುರುಷ ಮಾಡಬೇಕು ಎನ್ನುತ್ತದೆ ಕಠೋಪನಿಷತ್ತು. ಪುರುಷ ಎಂದರೆ ಅಂತರಾತ್ಮ, ಮನಸ್ಸು, ಬುದ್ಧಿ.
ಓಮಿತ್ಯೇತದಕ್ಷರಮುದ್ಗೀಥಮುಪಾಸೀತ.... ಎನ್ನುತ್ತದೆ ಛಾಂದೋಗ್ಯ ಉಪನಿಷತ್ತು. ಓಂ ಎಂಬ ಪ್ರಣವವೇ ಬ್ರಹ್ಮ. ಅದರ ಅನಂತತೆಯ ಅರಿಯುವುದಕ್ಕೆ ಕರ್ತವ್ಯ, ಕರ್ಮಗಳನ್ನು ಅರಿತುಕೊಳ್ಳುವುದೇ ಬ್ರಹ್ಮಚರ್ಯ ಎನ್ನುತ್ತದೆ.
ಋತಂ ಪಿಬಂತೌ ಸುಕೃತಸ್ಯ ಲೋಕೇ | ಗುಹಾಂ ಪ್ರವಿಷ್ಟೌ ಪರಮೇ ಪರಾರ್ಧೇ || ಛಾಯಾ ತಪೌ ಬ್ರಹ್ಮವಿದೋ ವದಂತಿ | ಪಂಚಾಗ್ನಯೋ ಯೇಚ ತ್ರಿಣಾಚಿಕೇತಾ |
ಸ್ತ್ರೀರೂಪಿಯಾದ ಶರೀರ ಎಂಬ ಅಪೋಲೋಕದಲ್ಲಿ ಪುರುಷರೂಪಿಯಾದ ಋತ ಎಂಬ ಆತ್ಮರೂಪಿ ಬ್ರಹ್ಮ ನೆಲೆಸಿದ್ದಾನೆ. ಪ್ರಜ್ಞಾನ ಎಂಬ ಗುಹೆಯಲ್ಲಿ ಈ ಆತ್ಮಬ್ರಹ್ಮನ ವಾಸ. ಸ್ತ್ರೀ, ಪುರುಷರೂಪಿ ಶಕ್ತಿಗಳೆರಡನ್ನೂ ಛಾಯೆ ಮತ್ತು ತಪ ಎನ್ನುತ್ತಾರೆ.
ಏಷ ಸರ್ವೇಷು ಭೂತೇಷು ಗೂಢೋ$ತ್ಮಾನ ಪ್ರಕಾಶತೇ | ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷ್ಮ ದರ್ಶಿಭಿಃ |
ಆತ್ಮ ಎಂಬ ಪರಮಪುರುಷನನ್ನು ಕಾಣುವುದು ಸುಲಭದ ವಿಚಾರ ಅಲ್ಲ. ಉಮಾಹೈಮವತಿ, ಅಥವಾ ಶರೀರ ಎಂಬ ಸ್ತ್ರೀರೂಪ (ಇದುವೇ ಆತ್ಮ ಎಂಬ ಪುರುಷನನ್ನು ತೋರಿಸುವ ಗುರು ಎಂದು ಮೃತ್ಯು ನಚೀಕೇತನಿಗೆ ಹೇಳುತ್ತಾನೆ) ಮೂಲಕವಾಗಿ ಉಪಾಸನೆಯ ದಾರಿ ಕಂಡುಕೊಂಡು ನಂತರ ಬುದ್ಧಿ ಎಂಬ ಪುರುಷರೂಪದ ಮೂಲಕ ಮನಸ್ಸಿನಿಂದ ಉಪಾಸನೆ ಮಾಡಿದರೆ ಪರಮಪುರುಷನಾದ ಆತ್ಮದ ಬೆಳಕು ಕಾಣುತ್ತದೆ.
ಇಂಥ ಪರಮಜ್ಞಾನವನ್ನು ಅರಿತುಕೊಳ್ಳುವ ಪ್ರಯತ್ನ ಮಾಡೋಣ. ಶಾರದೆಯ ಗುಣಗಾನ ಮಾಡುತ್ತಾ ಜ್ಞಾನೋಪಾಸನೆಯ ಮಾರ್ಗ ಕಂಡುಕೊಂಡು ನಿಜಜ್ಞಾನದ ಸಾಕ್ಷಾತ್ಕಾರ ಮಾಡಿಕೊಳ್ಳೋಣ.
ಸುಭಾಷಿತಾಂ ಸುಧಾಕಾಂತಾಂ ಭಾರತೀಂ ಪ್ರಣಮಾಮ್ಯಹಂ |
ಶಬ್ದಬ್ರಹ್ಮಮಯೀಂ ಧ್ಯಾಯೇ ಧ್ಯಾನಕಾಮಃ ಸಮಾಹಿತಃ ||
ಶುಕ್ಲಾಂ ಬ್ರಹ್ಮವಿಚಾರಸಾರಪರಮಾಮಾದ್ಯಾಂ ಜಗದ್ವ್ಯಾಪಿನೀಂ |
ವೀಣಾಪುಸ್ತಕಧಾರಿಣೀಮಭಯದಾಂ ಜಾಡ್ಯಾಂಧಕಾರಾಪಹಾಮ್ ||
ಹಸ್ತೇ ಸ್ಫಾಟಿಕಮಾಲಿಕಾಂ ವಿದಧತೀಂ ಪದ್ಮಾಸನೇ ಸಂಸ್ಥಿತಾಂ |
ವಂದೇ ತಾಂ ಜಗದೀಶ್ವರೀಂ ಭಗವತೀಂ ಬುದ್ಧಿಪ್ರದಾಂ ಶಾರದಾಂ ||
Advertisement