ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 2019ರ ಆಯವ್ಯಯ ಬಜೆಟ್ ಮಂಡನೆ ಮಾಡುತ್ತಿದ್ದು ಬಿಯರ್ ಪ್ರಿಯರಿಗೆ ಕುಮಾರಸ್ವಾಮಿ ಅವರು ಶಾಕ್ ನೀಡಿದ್ದಾರೆ.
ಹೌದು, ಕುಮಾರಸ್ವಾಮಿ ಅವರು ಇಂದು ಮಂಡಿಸಿದ ಬಜೆಟ್ ನಲ್ಲಿ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ. ಇದರಿಂದ ಬಿಯರ್ ಮೊತ್ತ ಮತ್ತಷ್ಟು ಹೆಚ್ಚಾಗಲಿದೆ.
ಪ್ರಸಕ್ತ ಸಾಲಿನ ಆರ್ಥಿಕ ವರ್ಷಕ್ಕೆ 20,950 ಕೋಟಿ ರುಪಾಯಿ ರಾಜಸ್ವ ಸಂಗ್ರಹಣೆ ಗುರಿ ಹೊಂದಿರುವ ರಾಜ್ಯ ಸರ್ಕಾರ ಬಿಯರ್, ಡ್ರಾಟ್ ಬಿಯರ್, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಹಾಗೂ ಕಡಿಮೆ ಆಲ್ಕೋಹಾಲಿಕ್ ಬಿವರೇಜಸ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಿಸಲು ನಿರ್ಧರಿಸಿದೆ.
ರೈತರ ಸಾಲ ಮನ್ನಾ ಮತ್ತಿತರ ವಲಯಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಅಬಕಾರಿ ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.
ಸರಕು ಮತ್ತು ಸೇವಾ ತೆರಿಗೆ ಜಿ.ಎಸ್.ಟಿ. ಅಡಿ ರಾಜಸ್ವ ಅಂತರ ಸರಿದೂಗದಿದ್ದರೆ ರಾಜ್ಯಗಳಿಗೆ ಪರಿಹಾರ ಕಾಯ್ದೆಯಡಿ ನಿಗದಿಪಡಿಸಿದಂತೆ ಸಾಕಷ್ಟು ಪರಿಹಾರವನ್ನು 2025ನೇ ಸಾಲಿನವರೆಗೂ ವಿಸ್ತರಿಸುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಒತ್ತಾಯಿಸಿದ್ದಾರೆ.