ಬೆಂಗಳೂರು: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಯೋಜನೆ ಜಾರಿಯಾದಾಗ ಲಾಲಿಪಪ್ ಎಂದು ವ್ಯಂಗ್ಯವಾಡಿದ್ದ ಪ್ರಧಾನಿ ನರೇಂದ್ರ ಮೋದಿ 2019-20 ನೇ ಸಾಲಿನ ಬಜೆಟ್ ನಲ್ಲಿ ರೈತರಿಗೆ ಪ್ರಧಾನಿ ಮೋದಿ ರೈತರಿಗೆ ಕಾಟನ್ ಕ್ಯಾಂಡಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯೆಲ್ ಇಂದು ಮಂಡಿಸಿರುವ 2019-20 ನೇ ಸಾಲಿನ ಕೇಂದ್ರ ಬಜೆಟ್ ಸಂಪೂರ್ಣ ವಿಫಲವಾಗಿದ್ದು, ನಿರಾಶದಾಯಕ ಬಜೆಟ್ ಆಗಿದೆ ಎಂದು ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿವರ್ಷ ರೈತರ ಖಾತೆಗೆ 6 ಸಾವಿರ ರೂ. ನೇರ ನಗದು ವರ್ಗಾವಣೆ ಮಾಡುವುದಾಗಿ ಹೇಳಲಾಗಿದೆ. ಆದರೆ, ಇದರಿಂದ ಎಷ್ಟು ಜನರಿಗೆ ಅನುಕೂಲವಾಗುತ್ತದೆಯೋ ಗೊತ್ತಿಲ್ಲ,5 ರೂ. ಲಕ್ಷವರೆಗೂ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದಾರೆ. ಇದನ್ನು ಕಳೆದ ಐದು ವರ್ಷಗಳಿಂದಲೂ ನಿರೀಕ್ಷಿಸಲಾಗಿತ್ತು ಎಂದರು.
ಹೊಸ ರೈಲ್ವೆ ಬಜೆಟ್ ನಲ್ಲಿ ಸಬರನ್ ರೈಲು ಯೋಜನೆಗೆ ಒಪ್ಪಿಗೆ ನೀಡಿಲ್ಲ. ತಾತ್ಕಾಲಿಕವಾದರೂ ಜನರನ್ನು ಮೆಚ್ಚಿಸುವ ನಿರೀಕ್ಷೆಯಿತ್ತು. ಆದರೆ, ಅದು ಆಗಿಲ್ಲ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಮತ್ತಿತರ ಯಾವುದೇ ಹೊಸ ಯೋಜನೆಗಳ ಪ್ರಸ್ತಾಪ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಇದು ಹಣಕಾಸು ಇಲಾಖೆ ಸಿಬ್ಬಂದಿಗಳು ತಯಾರಿಸಿರುವ ಬಜೆಟಾ ? ಅಥವಾ ಆರ್ ಎಸ್ ಎಸ್, ಬಿಜೆಪಿಯ ಸ್ನೇಹಿತರು ರೂಪಿಸಿರುವ ಬಜೆಟಾ? ಎಂದು ಕೇಳಲು ಬಯಸುವುದಾಗಿ ಕುಮಾರಸ್ವಾಮಿ ಹೇಳಿದರು.
Advertisement