ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ 2020-21ನೇ ಸಾಲಿನ ಬಜೆಟ್ ನಲ್ಲಿ ಶಿಕ್ಷಣ ವಲಯಕ್ಕೆ 99 ಸಾವಿರದ 300 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಘೋಷಿಸಿದ್ದಾರೆ.
ಶಿಕ್ಷಣ ವಲಯಕ್ಕೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಸಚಿವೆ ಘೋಷಿಸಿದ ಕ್ರಮಗಳು:
-ಭಾರತದಲ್ಲಿ ಅಧ್ಯಯನವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ 'ಸ್ಟಡಿ ಇನ್ ಇಂಡಿಯಾ'ಯೋಜನೆಯನ್ನು ಅಭಿವೃದ್ಧಿಪಡಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ.
-ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲು ಶಿಕ್ಷಕರ ಕಲಿಸುವ ಗುಣಮಟ್ಟ ಉತ್ತಮವಾಗಿರಬೇಕು. ಉತ್ತಮ ಶಿಕ್ಷಕರು ಸಿಗಲು ಅವರಿಗೆ ಉತ್ತಮ ವೇತನ ನೀಡಬೇಕು. ಹೀಗಾಗಿ ಶಿಕ್ಷಣ ವಲಯಕ್ಕೆ ಹೆಚ್ಚಿನ ಹಣಕಾಸು ಒದಗಿಸಲು ಕೇಂದ್ರ ಸರ್ಕಾರ ಮುಂದು.
-ಶಿಕ್ಷಣ ವಲಯಕ್ಕೆ ವಿದೇಶಿ ನೇರ ಹೂಡಿಕೆ(ಎಫ್ ಡಿಐ) ಮತ್ತು ಬಾಹ್ಯ ವಾಣಿಜ್ಯ ಸಾಲ(ಇಸಿಬಿ)ಯನ್ನು ತರಲು ಸರ್ಕಾರ ಪ್ರಯತ್ನಿಸುತ್ತಿದೆ.
-ಮಾರ್ಚ್ 2021ರ ವೇಳೆಗೆ 150 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಪ್ರೆಂಟಿಸ್ಶಿಪ್ ಕಾರ್ಯಕ್ರಮಗಳು.
-ಇಂಜಿನಿಯರಿಂಗ್ ಪದವಿ ಮುಗಿಸಿ ಆಗಷ್ಟೇ ಹೊರಬಂದ ಅಭ್ಯರ್ಥಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಒಂದು ವರ್ಷ ಕಾಲ ಉದ್ಯೋಗಾವಕಾಶ, ಇದರಿಂದ ಉದ್ಯೋಗ ಕಲಿಕೆಗೆ ಹೊಸ ಅಭ್ಯರ್ಥಿಗಳಿಗೆ ಒಂದು ಉತ್ತಮ ವೇದಿಕೆ ಒದಗಿಸುವುದು.
-ಇನ್ನು ಮುಂದೆ ಪದವಿ ಗಳಿಸಲು ಕಾಲೇಜು, ವಿವಿಗಳಿಗೆ ಹೋಗಬೇಕೆಂದೇನಿಲ್ಲ, ಉನ್ನತ 100 ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು(ಎನ್ಐಆರ್ ಎಫ್) ಸಂಸ್ಥೆಗಳಿಂದ ಸದ್ಯದಲ್ಲಿಯೇ ಆನ್ ಲೈನ್ ಕಲಿಕೆ ವ್ಯವಸ್ಥೆ ಪ್ರಾರಂಭ.
-ಭಾರತದಲ್ಲಿ ಕಲಿಕೆಗೆ ಏಷ್ಯಾ ಮತ್ತು ಆಫ್ರಿಕಾ ಖಂಡದವರಿಗೆ ಸ್ಕಾಲರ್ ಷಿಪ್.
-ಪೊಲೀಸ್ ಮತ್ತು ವಿಧಿ ವಿಜ್ಞಾನ ಅಕಾಡೆಮಿಗಳ ಸ್ಥಾಪನೆ.
-ವಿದೇಶಗಳಲ್ಲಿ ಶಿಕ್ಷಕರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಆರೈಕೆ ಮಾಡುವವರಿಗೆ ಭಾರಿ ಬೇಡಿಕೆ ಇದೆ. ಆದರೆ ಅವರಲ್ಲಿ ಕೆಲಸದ ಗುಣಮಟ್ಟ ಉತ್ತಮವಾಗಿಲ್ಲ. ಹೀಗಾಗಿ ಈ ಕ್ಷೇತ್ರಗಳ ಗುಣಮಟ್ಟ ಹೆಚ್ಚಿಸುವ ಅಗತ್ಯವಿದೆ.
-ಮೋದಿ ಸರ್ಕಾರದ ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎಲ್ಲಾ ಹಂತಗಳ ಶಿಕ್ಷಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ದಾಖಲಾತಿ ಪ್ರಮಾಣವೇ ಹೆಚ್ಚಾಗಿದೆ.
Advertisement