ಜಿಎಸ್‌ಟಿ ಜಾರಿ ಐತಿಹಾಸಿಕ ಕ್ರಮ, ಜಾರಿಗೊಳಿಸಿದ ಅರುಣ್ ಜೇಟ್ಲಿ ಅವರಿಗೆ ಧನ್ಯವಾದ: ನಿರ್ಮಲಾ ಸೀತಾರಾಮನ್

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ಐತಿಹಾಸಿಕ ಕ್ರಮವಾಗಿದ್ದು, ಅದನ್ನು ರೂಪಿಸಿದ ಅರುಣ್‌ ಜೇಟ್ಲಿ ಅವರಿಗೆ ನನ್ನ ನಮನ ಸಲ್ಲಿಸುತ್ತೇನೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ಐತಿಹಾಸಿಕ ಕ್ರಮವಾಗಿದ್ದು, ಅದನ್ನು ರೂಪಿಸಿದ ಅರುಣ್‌ ಜೇಟ್ಲಿ ಅವರಿಗೆ ನನ್ನ ನಮನ ಸಲ್ಲಿಸುತ್ತೇನೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಇಂದು ಸಂಸತ್ ನಲ್ಲಿ 2020ನೇ ಸಾಲಿನ ಆಯವ್ಯಯ ಪಟ್ಟಿ ಓದುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ಜನರ ಖರೀದಿ ಸಾಮರ್ಥ್ಯ ವೃದ್ಧಿಸುವ ಬಜೆಟ್ ಇದು. ತಂತ್ರಜ್ಞಾನದ ನೆರವಿನಿಂದ ಜನರ ಬದುಕು ಸುಧಾರಿಸಲು ನಾವು ಬದ್ಧರಾಗಿದ್ದೇವೆ. ಸಮಾಜದ ಎಲ್ಲ ವರ್ಗಗಳ ಆಶೋತ್ತರಗಳನ್ನು ಬಿಂಬಿಸುವ ಬಜೆಟ್ ಇದು. 2014–19ರ ಅವಧಿಯಲ್ಲಿ ನಮ್ಮ ಸರ್ಕಾರವು ಅಡಳಿತದಲ್ಲಿ ಬದಲಾವಣೆ ತಂದಿತ್ತು. ಮೂಲಭೂತ ವ್ಯವಸ್ಥೆಯ ಬದಲಾವಣೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ನಾವು ಗಮನ ಕೊಟ್ಟೆವು. ಹಣದುಬ್ಬರ ನಿಯಂತ್ರಣದಲ್ಲಿಡುವ ಜೊತೆಗೆ ಬ್ಯಾಂಕ್‌ಗಳ ಕೆಟ್ಟ ಸಾಲದ ಬಗ್ಗೆ ಗಮನ ನೀಡಲಾಯಿತು.  ಅಂತೆಯೇ ತಮ್ಮ ಭಾಷಣದಲ್ಲಿ ಮಾಜಿ ವಿತ್ತ ಸಚಿವ, ದಿವಂಗತ ಅರುಣ್‌ ಜೇಟ್ಲಿ ಅವರನ್ನು ನೆನೆದರು. 

ಇದೇ ವೇಳೆ ಜಿಎಸ್ ಟಿ ಕುರಿತು ಜೇಟ್ವಿ ಅವರ ಮಾತುಗಳನ್ನು ನೆನೆದ  ನಿರ್ಮಲಾ, 'ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ಐತಿಹಾಸಿಕ ಕ್ರಮವಾಗಿದ್ದು, ಅದನ್ನು ರೂಪಿಸಿದ ಅರುಣ್‌ ಜೇಟ್ಲಿ ಅವರಿಗೆ ನನ್ನ ನಮನ ಸಲ್ಲಿಸುತ್ತೇನೆ. ಜಿಎಸ್‌ಟಿ ಜಾರಿ ಮಾಡುವಾಗ ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶಾಭಿವೃದ್ಧಿಯ ಸಮಾನ ಗುರಿಗಾಗಿ ಕೆಲಸ ಮಾಡಿದಾಗ ಭಾರತವು ಭಾರತವಾಗಿ ಉಳಿಯಲು ಸಾಧ್ಯವಾಗುತ್ತೆ. ಜಿಎಸ್‌ಟಿ ಮೂಲಕ ಯಾವುದೇ ರಾಜ್ಯವು ಸ್ವಾತಂತ್ರ್ಯ ಕಳೆದುಕೊಳ್ಳುವುದಿಲ್ಲ ಎಂದು ಜೇಟ್ಲಿ ಹೇಳಿದ್ದರು ಎಂದು ಹೇಳಿದರು.

ಮೂಲಸೌಕರ್ಯ ಮತ್ತು ಸಾರಿಗೆ ವಿಚಾರದಲ್ಲಿ ಜಿಎಸ್‌ಟಿಯಿಂದ ಸಾಕಷ್ಟು ಒಳ್ಳೆಯ ಫಲಿತಾಂಶಗಳು ಕಂಡು ಬಂದಿವೆ. ಇನ್‌ಸ್ಪೆಕ್ಟರ್‌ ರಾಜ್‌ಗೆ ಅಂತ್ಯಹಾಡಲಾಗಿದೆ. ತೆರಿಗೆ ವಸೂಲಾತಿಯೂ ಪರಿಣಾಮಕಾರಿಯಾಗಿದೆ. ಕೆಲ ಕ್ಷೇತ್ರಗಳಲ್ಲಿ ತೆರಿಗೆ ಕಡಿತವಾಗಿದ್ದು, ಅದರ ಲಾಭ ಗ್ರಾಹಕರಿಗೆ ದೊರೆಯುತ್ತಿದೆ. ಜಿಎಸ್‌ಟಿ ಕಾರಣದಿಂದಾಗಿ ಪ್ರತಿ ಕುಟುಂಬ ತಮ್ಮ ಖರ್ಚಿನಲ್ಲಿ ಶೇ 4ರಷ್ಟು ಹಣವನ್ನು ಉಳಿಸುತ್ತಿದೆ. 60 ಲಕ್ಷ ಹೊಸ ತೆರಿಗೆ ಪಾವತಿದಾರರನ್ನು ನಾವು ಹುಡುಕಿದ್ದೇವೆ. ಸರಳ ತೆರಿಗೆ ಪಾವತಿ ವಿಧಾನವನ್ನು ರೂಪಿಸಿದ್ದೇವೆ. ತೆರಿಗೆ ಪಾವತಿ ಪ್ರಮಾಣವೂ ಹೆಚ್ಚಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com