ಮುಂಬೈ: ಕೇಂದ್ರ ಮುಂಗಡ ಪತ್ರ 2021-22ಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ವರ್ಗದ ಆಶೋತ್ತರಗಳನ್ನು ಈಡೇರಿಸುವ ಭರವಸೆ ನೀಡಿದೆ, ಎಲ್ಲ ವಲಯಗಳಿಗೂ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ.
ಆದಾಗ್ಯೂ, ಮನರಂಜನಾ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಚಿತ್ರೋದ್ಯಮದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೋರಾನ ಸಂದರ್ಭದಲ್ಲಿ ತೀವ್ರ ನಲುಗಿದ ಕ್ಷೇತ್ರಗಳಲ್ಲಿ ಚಿತ್ರೋದ್ಯಮವೂ ಸೇರಿದ್ದು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಬಜೆಟ್ ನಿಂದ ಪರಿಹಾರ ನಿರೀಕ್ಷಿಸಲಾಗಿತ್ತು. ಆದರೆ ಘೋಷಿತ ಬಜೆಟ್ ನಿರಾಸೆ ಮೂಡಿಸಿದೆ ಎಂಬ ಮಾತು ಕೇಳಿಬಂದಿದೆ.
'ಬಜೆಟ್ನಲ್ಲಿ ಮನರಂಜನಾ ಕ್ಷೇತ್ರದ ಬಗ್ಗೆ ಯಾವುದೇ ಉಲ್ಲೇಖ ಮಾಡದಿರುವುದು ದುರದೃಷ್ಟ. ಕನಿಷ್ಠ ಹೆಚ್ಚುವರಿ ಹೊರೆಗಳಿಲ್ಲ ಎನ್ನುವುದು ಸಮಾಧಾನ ಅಷ್ಟೇ. ಸಾಂಕ್ರಾಮಿಕ ರೋಗ ಪರಿಣಾಮ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ ಕ್ಷೇತ್ರ ಚಿತ್ರರಂಗ ಎಂಬುದರಲ್ಲಿ ಸಂದೇಹವಿಲ್ಲ. ಈ ಕುರಿತು ಗಮನಿಸಬೇಕಾದ ಅಗತ್ಯವಿದೆ ಎಂದು ಹಿಂದಿ ಚಲನಚಿತ್ರ ಪ್ರದರ್ಶಕ ಅಕ್ಷಯ್ ರತಿ ಪ್ರತಿಕ್ರಿಯಿಸಿದ್ದಾರೆ.
ನಿರ್ಮಾಪಕ ಟಿಪಿ ಅಗರ್ವಾಲ್, 'ನಾವು ಸರ್ಕಾರದಿಂದ ಹೆಚ್ಚು ನಿರೀಕ್ಷೆ ಹೊಂದಿರಲಿಲ್ಲ. ನಮಗೆ ಯಾವುದೇ ಸಾಲ ದೊರೆಯುವುದಿಲ್ಲ. ಒಂದು ವೇಳೆ ಸಾಲ ಬೇಕಿದ್ದರೆ ನಮ್ಮ ಆಸ್ತಿಯನ್ನು ಅಡವಿಡಬೇಕು. ನಾವು ನಿರ್ಮಿಸುವ ಸಿನಿಮಾವನ್ನು ಅಡಮಾನ ಇಡಲು ಸಾಧ್ಯವಿಲ್ಲ. ಆದರೆ, ಜಿಎಸ್ಟಿ ಮತ್ತು ತೆರಿಗೆಯಲ್ಲಿ ಸ್ವಲ್ಪ ಕಡಿತ ಎದುರು ನೋಡುತ್ತಿದ್ದೆವು' ಎಂದಿದ್ದಾರೆ.
Advertisement