ಡಿಜಿಟಲ್ ಪಾವತಿ ಉತ್ತೇಜನಕ್ಕೆ 1,500 ಕೋಟಿ ರೂ. ಯೋಜನೆ: ನಿರ್ಮಲಾ ಸೀತಾರಾಮನ್
ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಗೆ ಪುಷ್ಟಿ ನೀಡಲು, ದೇಶದಲ್ಲಿ ಆವಿಷ್ಕಾರ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು, ಆರ್ಥಿಕ ವರ್ಷ 2021-22 ರ ಕೇಂದ್ರ ಬಜೆಟ್ ಹೊಸ ಉಪಕ್ರಮಗಳನ್ನು ಘೋಷಿಸಿದೆ.
Published: 01st February 2021 05:22 PM | Last Updated: 01st February 2021 05:52 PM | A+A A-

ಡಿಜಿಟಲ್ ಪೇಮೆಂಟ್
ನವದೆಹಲಿ: ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಗೆ ಪುಷ್ಟಿ ನೀಡಲು, ದೇಶದಲ್ಲಿ ಆವಿಷ್ಕಾರ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು, ಆರ್ಥಿಕ ವರ್ಷ 2021-22 ರ ಕೇಂದ್ರ ಬಜೆಟ್ ಹೊಸ ಉಪಕ್ರಮಗಳನ್ನು ಘೋಷಿಸಿದೆ.
ಡಿಜಿಟಲ್ ಪಾವತಿ, ಬಾಹ್ಯಾಕಾಶ ವಲಯ ಮತ್ತು ಸಾಗರದಾಳದ ಪರಿಶೋಧನೆಗಳನ್ನು ಒಳಗೊಂಡಿರುವ ಪ್ರಸ್ತಾವಿತ ಉಪಕ್ರಮಗಳನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಾಗಿ ಮುಂಬರುವ 5 ವರ್ಷಗಳಲ್ಲಿ ರೂ. 50,000 ಕೋಟಿಯನ್ನು ಹಣಕಾಸು ಸಚಿವೆ ಪ್ರಸ್ತಾಪಿಸಿದ್ದಾರೆ. “ರಾಷ್ಟ್ರೀಯ-ಆದ್ಯತೆಗಾಗಿ ಒತ್ತು ನೀಡಬೇಕೆಂದು ಗುರುತಿಸಲಾದ ಪ್ರದೇಶಗಳ ಮೇಲೆ ಗಮನಹರಿಸಲಾಗಿದೆ ಮತ್ತು ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಗೆ ಪುಷ್ಠಿ ನೀಡಲಾಗಿದೆ ಎಂಬುದನ್ನು ಇದು ಖಚಿತಪಡಿಸುತ್ತದೆ” ಎಂದೂ ಅವರು ಹೇಳಿದರು.
ಡಿಜಿಟಲ್ ಪಾವತಿಗಳಿಗೆ ಉತ್ತೇಜನ: ಇತ್ತೀಚಿನ ದಿನಗಳಲ್ಲಿ, ಡಿಜಿಟಲ್ ಪಾವತಿಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಮತ್ತು ಈ ಚಲನಗತಿಯನ್ನು ಮುಂದುವರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಸೀತಾರಾಮನ್ ಸಂಸತ್ತಿನಲ್ಲಿ ತಿಳಿಸಿದರು. ಡಿಜಿಟಲ್ ಪಾವತಿ ಪದ್ಧತಿಗಳಿಗೆ ಪ್ರೋತ್ಸಾಹ ನೀಡಲು ಮತ್ತು ಡಿಜಿಟಲ್ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಆರ್ಥಿಕ ಪ್ರೋತ್ಸಾಹ ನೀಡುವ 1,500 ಕೋಟಿ ರೂ. ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
ರಾಷ್ಟ್ರೀಯ ಭಾಷಾ ಅನುವಾದ ಮಿಷನ್ (ಎನ್ ಟಿ ಎಲ್ ಎಂ)ಎಂಬ ಹೊಸ ಉಪಕ್ರಮವನ್ನು ಪ್ರಸ್ತಾಪಿಸಲಾಗಿದ್ದು, ಇದು ಇಂಟರ್ ನೆಟ್ ನಲ್ಲಿ ಆಡಳಿತ ಮತ್ತು ನೀತಿಗಳಿಗೆ ಸಂಬಂಧಿಸಿದ ಜ್ಞಾನ ಭಂಡಾರದ ಡಿಜಿಟಲೀಕರಣ, ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿರುವ ಪಿಎಸ್ಯು ನ್ಯೂ ಸ್ಪೇಸ್ ಇಂಡಿಯಾ ನಿಯಮಿತ (ಎನ್ ಎಸ್ ಐ ಎಲ್) ಪಿ ಎಸ್ ಎಲ್ ವಿ-ಸಿ ಎಸ್ 51 ಉಡಾವಣೆಯನ್ನು ಕಾರ್ಯಗತಗೊಳಿಸಲಿದ್ದು, ಕೆಲವು ಚಿಕ್ಕ ಭಾರತೀಯ ಉಪಗ್ರಹಗಳ ಜೊತೆಗೆ, ಬ್ರೆಜಿಲ್ನಿಂದ ಅಮೆಜೋನಿಯಾ ಉಪಗ್ರಹವನ್ನು ಹೊತ್ತೊಯ್ಯುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಡಿಸೆಂಬರ್ 2021ರಲ್ಲಿ ಪ್ರಾರಂಭವಾಗಲಿರುವ ಗಗನಯಾನ ಮಿಷನ್ ಗೆಂದು ಭಾರತದ ನಾಲ್ಕು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ಉಡ್ಡಯನದ ಸಾಮಾನ್ಯ ಅಂಶಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಸಾಗರದಾಳದ ಯೋಜನೆ: ಸಾಗರಗಳ ಅಧ್ಯಯನ ಹಾಗೂ ಸಾಗರದಾಳದ ಯೋಜನೆಯನ್ನು ಪ್ರಾರಂಭಿಸಲು ಐದು ವರ್ಷಗಳಲ್ಲಿ ಸುಮಾರು ರೂ. 4,000 ಕೋಟಿಗೂ ಹೆಚ್ಚು ಬಜೆಟ್ ಅನ್ನು ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಈ ಮಿಷನ್ ಆಳವಾದ ಸಾಗರ ಸಮೀಕ್ಷೆ ಹಾಗೂ ಪರಿಶೋಧನೆ ಮತ್ತು ಸಾಗರದಾಳದ ಜೈವಿಕ ವೈವಿಧ್ಯತೆಯ ಸಂರಕ್ಷಣೆಗಾಗಿ ಯೋಜನೆಗಳನ್ನು ಒಳಗೊಂಡಿದೆ.