ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ತಮ್ಮ ಬಜೆಟ್ ಭಾಷಣದಲ್ಲಿ ಅಗ್ರಿ ಸ್ಟಾರ್ಟಪ್ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಅಂತರ್ಗತ ಅಭಿವೃದ್ಧಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಆದ್ಯತೆ ಎಂದು ಒತ್ತಿ ಹೇಳಿದರು.
ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಮುಕ್ತ ಮೂಲ, ಮುಕ್ತ ಗುಣಮಟ್ಟ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಸಾರ್ವಜನಿಕ ಒಳಿತಿಗಾಗಿ ನಿರ್ಮಿಸಲಾಗುವುದು. ಇದು ಬೆಳೆ ಯೋಜನೆಗೆ ರೈತ ಕೇಂದ್ರಿತ ಪರಿಹಾರವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡಿ 2024ಕ್ಕೆ ಕೃಷಿ ಸಾಲದ ಗುರಿಯನ್ನು ₹ 20 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ ಎಂದು ಸಚಿವೆ ಹೇಳಿದರು.
ನಿನ್ನೆ ಮಂಡಿಸಲಾದ ಆರ್ಥಿಕ ಸಮೀಕ್ಷೆಯು ಕೃಷಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಆದರೆ, ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳು, ಹೆಚ್ಚುತ್ತಿರುವ ಇನ್ಪುಟ್ ವೆಚ್ಚ ಮುಂತಾದ ಸವಾಲುಗಳನ್ನು ಜಯಿಸಲು ಕ್ಷೇತ್ರಕ್ಕೆ 'ಮರು ದೃಷ್ಟಿಕೋನ' ಒದಗಿಸುವ ಅಗತ್ಯವಿದೆ ಎಂದು ಹೇಳಿದೆ.
ಸಮೀಕ್ಷೆಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಕೃಷಿ ಕ್ಷೇತ್ರವು ಸರಾಸರಿ ವಾರ್ಷಿಕ ಬೆಳವಣಿಗೆಯ ದರದಲ್ಲಿ 4.6 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ. ಇದು 2020-21 ರಲ್ಲಿ ಶೇ 3.3ರಷ್ಟಿದ್ದು, 2021-22 ರಲ್ಲಿ ಶೇ 3 ರಷ್ಟು ಬೆಳವಣಿಗೆ ಕಂಡಿದೆ.
ಇತ್ತೀಚಿನ ವರ್ಷಗಳಲ್ಲಿ, ಭಾರತವು ಕೃಷಿ ಉತ್ಪನ್ನಗಳ ನಿವ್ವಳ ರಫ್ತುದಾರನಾಗಿ ವೇಗವಾಗಿ ಹೊರಹೊಮ್ಮಿದೆ. 2021-22ರಲ್ಲಿ ಕೃಷಿ ರಫ್ತು 50.2 ಶತಕೋಟಿ ಡಾಲರ್ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು.
Advertisement