ನಾನು ಹಣ ಕದ್ದಿದ್ದೇನೆ ಎಂಬ ಹಣೆಪಟ್ಟಿಯನ್ನು ತೆಗೆಯಬೇಕು: ವಿಜಯ್ ಮಲ್ಯ

ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಪುನರುಚ್ಚರಿಸಿದ್ದಾರೆ. ಅನೇಕ ಬ್ಯಾಂಕುಗಳಿಂದ ಸಾಲ ಪಡೆದು...
ವಿಜಯ್ ಮಲ್ಯ (ಸಂಗ್ರಹ ಚಿತ್ರ)
ವಿಜಯ್ ಮಲ್ಯ (ಸಂಗ್ರಹ ಚಿತ್ರ)

ನವದೆಹಲಿ: ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಪುನರುಚ್ಚರಿಸಿದ್ದಾರೆ.

ವಿಜಯ್ ಮಲ್ಯ ಅನೇಕ ಬ್ಯಾಂಕುಗಳಿಂದ ಸಾಲ ಪಡೆದು ಅದನ್ನು ಹಿಂತಿರುಗಿಸದೆ ದೇಶ ಬಿಟ್ಟು ಓಡಿಹೋಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿರುವುದಕ್ಕೆ ನಿನ್ನೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ವಿಜಯ್ ಮಲ್ಯ ಹಣವನ್ನು ಸ್ವೀಕರಿಸುವಂತೆ ಸರ್ಕಾರಕ್ಕೆ ಮತ್ತು ಬ್ಯಾಂಕುಗಳಿಗೆ ಮನವಿ ಮಾಡಿದ್ದರು.

ಭಾರತಕ್ಕೆ ನನ್ನನ್ನು ಹಸ್ತಾಂತರಿಸುವುದು ಮತ್ತು ಸಾಲ ಮರು ಪಾವತಿ ಎರಡು ಪ್ರತ್ಯೇಕ ಸಂಗತಿಗಳಾಗಿವೆ. ಅದು ಕಾನೂನು ರೀತಿಯಲ್ಲಿಯೇ ನಡೆಯಲಿ. ಸಾರ್ವಜನಿಕರ ದುಡ್ಡು ಪ್ರಮುಖ ಸಂಗತಿ. ನಾನು ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಸಿದ್ದನಿದ್ದೇನೆ. ಬ್ಯಾಂಕು ಮತ್ತು ಸರ್ಕಾರ ಅದನ್ನು ದಯಮಾಡಿ ಸ್ವೀಕರಿಸಬೇಕು ಎಂದು ಮಲ್ಯ ನಿನ್ನೆ ಟ್ವೀಟ್ ಮಾಡಿದ್ದರು.

ತಮ್ಮ ಸಾಲ ಮರುಪಾವತಿ ಮತ್ತು ಭಾರತಕ್ಕೆ ಗಡೀಪಾರು ಮಾಡುವುದನ್ನು ತಡೆಹಿಡಿಯಬೇಕೆಂದು ಇಂಗ್ಲೆಂಡಿನ ಕೋರ್ಟ್ ಗೆ ಮಾಡಿರುವ ಮನವಿಗೆ ಒಂದಕ್ಕೊಂದು ಸಂಬಂಧವಿಲ್ಲ ಎಂದು ಕೂಡ ಹೇಳಿದ್ದಾರೆ.

ನನ್ನ ಬಗ್ಗೆ ಮಾತನಾಡುವವರಿಗೆ ನಾನು ಒಂದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನನ್ನನ್ನು ಗಡೀಪಾರು ಮಾಡುವ ತೀರ್ಮಾನ ಅಥವಾ ಇತ್ತೀಚೆಗೆ ದುಬೈಯಿಂದ ಗಡೀಪಾರು ಮಾಡಿರುವುದು ಮತ್ತು ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿರುವುದಕ್ಕೆ ಒಂದಕ್ಕೊಂದು ಸಂಬಂಧವಿಲ್ಲ. ನಾನು ಎಲ್ಲೇ ಇರಲಿ, ನನ್ನ ಮನವಿ ಒಂದೇ, ದಯವಿಟ್ಟು ಹಣ ಸ್ವೀಕರಿಸಿ ಎಂದು. ನಾನು ಹಣ ಕದ್ದಿದ್ದೇನೆ ಎಂದು ಹೇಳುವುದನ್ನು ನಿಲ್ಲಿಸಬೇಕೆಂಬುದಷ್ಟೇ ನನ್ನ ಉದ್ದೇಶ ಎಂದು ಮಲ್ಯ ಇಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com