ಚೆನ್ನೈ: ಸಾವಿರಾರು ಕೋಟಿ ರೂಪಾಯಿ ವಂಚಿಸಿ ದೇಶಬಿಟ್ಟು ಹೋಗಿರುವ ಉದ್ಯಮಿ ನೀರವ್ ಮೋದಿ ಪ್ರಕರಣದಲ್ಲಿ ಉಂಟಾದ ಲೋಪದೋಷ ಹಿನ್ನಲೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಇಬ್ಬರು ಕಾರ್ಯಕಾರಿ ನಿರ್ದೇಶಕರಾದ ಸಂಜೀವ್ ಶರಣ್ ಮತ್ತು ಕೆ ವೀರ ಬ್ರಹ್ಮಾಜಿ ರಾವ್ ಅವರನ್ನು ಕೇಂದ್ರ ಸರ್ಕಾರ ಹುದ್ದೆಯಿಂದ ವಜಾಗೊಳಿಸಿದೆ.
ಈ ಕುರಿತು ಮುಂಬೈ ಷೇರು ವಿನಿಮಯ ಮಾರುಕಟ್ಟೆ ಕೇಂದ್ರಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿನ್ನೆ ಮಾಹಿತಿ ನೀಡಿದೆ.
ಇಬ್ಬರು ಕಾರ್ಯಕಾರಿ ನಿರ್ದೇಶಕರನ್ನು ಸೇವೆಯಿಂದ ವಜಾಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಬ್ಯಾಂಕಿನ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ಬಾರದೆ ಒಂದು ಸಂಸ್ಥೆಯಲ್ಲಿ ಇಂತಹ ಹಗರಣ ಬೆಳಕಿಗೆ ಬರುವುದಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಮ್ ತಿಳಿಸಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕುಗಳ ಯೋಜನೆ 1970ರಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕರನ್ನು ಕೇಂದ್ರ ಸರ್ಕಾರ ಹುದ್ದೆಯಿಂದ ತೆಗೆದುಹಾಕಿದ್ದು ಬಹುಶಃ ಇದೇ ಮೊದಲು ಇರಬೇಕು. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಕಾರ್ಯಕಾರಿ ನಿರ್ದೇಶಕರನ್ನು ಗುತ್ತಿಗೆ ಆಧಾರದ ಮೇಲೆ ಇತ್ತೀಚಿನ ದಿನಗಳಲ್ಲಿ ನೇಮಿಸಲಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಕಾರ್ಯನಿರ್ವಹಣೆಯಲ್ಲಿ ಸರಿಯಾದ ಹತೋಟಿ ಏಕೆ ಹೊಂದಿರಲಿಲ್ಲ, ತಮ್ಮ ಕಾರ್ಯದಲ್ಲಿ ವಿಫಲವಾಗಿದ್ದಕ್ಕೆ ಏಕೆ ತಮ್ಮನ್ನು ಸ್ಥಾನದಿಂದ ಕಿತ್ತೊಗೆಯಬಾರದು ಎಂದು ವಿವರಣೆ ನೀಡುವಂತೆ ಕೇಳಿ ಕಳೆದ ವರ್ಷ ಜುಲೈ 3ರಂದು ಕೇಂದ್ರ ಸರ್ಕಾರ ಶರಣ್ ಮತ್ತು ಬ್ರಹ್ಮಾಜಿ ರಾವ್ ಅವರಿಗೆ ಪತ್ರ ಕಳುಹಿಸಿತ್ತು.
ಶರಣ್ ಮತ್ತು ರಾವ್ ನೀಡಿದ ವಿವರಣೆ ಆಧಾರದ ಮೇಲೆ ಮತ್ತು ಬ್ಯಾಂಕ್ ನ ಮಂಡಳಿಯ ಹೇಳಿಕೆ ಪರಿಗಣಿಸಿ ಕೇಂದ್ರ ಸರ್ಕಾರ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ.
Advertisement