ನವದೆಹಲಿ: ಫ್ರಾಂಕ್ಲಿನ್ ಟೆಂಪ್ಲೆಟನ್ ಮ್ಯೂಚುವಲ್ ಫಂಡ್ ನ 6 ಸಾಲದ ಯೋಜನೆಗಳನ್ನು ಮುಚ್ಚುವ ನಿರ್ಧಾರವನ್ನು ತಡೆಯಲು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮಾಜಿ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಪ್ರಮುಖ ಮ್ಯೂಚುವಲ್ ಫಂಡ್ ಕಂಪೆನಿಯಾಗಿರುವ ಫ್ಲಾಂಕ್ಲಿನ್ ಟೆಂಪ್ಲೆಟನ್ ಕೊರೋನಾ ವೈರಸ್ ಸೋಂಕಿನಿಂದ ಹಣದ ಹರಿವು ಕಡಿಮೆಯಾಗಿರುವುದರಿಂದ 6 ಸಾಲದ ಯೋಜನೆಗಳನ್ನು ಮುಚ್ಚಲಾಗುವುದು ಎಂದು ಹೇಳಿತ್ತು.
ಇದರಿಂದ ಹೂಡಿಕೆದಾರರ ಮೇಲೆ, ಮ್ಯೂಚುವಲ್ ಫಂಡ್ ಉದ್ಯಮ ಮತ್ತು ಹಣಕಾಸು ಮಾರುಕಟ್ಟೆಗಳ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಹೇಳಿದ್ದಾರೆ.
2008ರ ಅಕ್ಟೋಬರ್ ಮೊದಲ ವಾರದಲ್ಲಿ ಕೂಡ ಇದೇ ರೀತಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದ ಸಮಯದಲ್ಲಿ ಮ್ಯೂಚುವಲ್ ಫಂಡ್ ಗಳು ಹಣದ ಹರಿವಿನ ಸಮಸ್ಯೆಯನ್ನು ನಮ್ಮ ದೇಶದಲ್ಲಿ ಎದುರಿಸಿದ್ದವು. ಸರ್ಕಾರ ಆಗ ಕೂಡಲೇ ಆರ್ ಬಿಐ, ಸೆಬಿ, ಐಬಿಎ, ಎಎಂಎಫ್ ಐ ಮತ್ತು ಇತರ ಹಣಕಾಸು ಸಂಸ್ಥೆಗಳನ್ನು ಸಮಾಲೋಚಿಸಿತು. ಎಫ್ಎಸ್ ಡಿಸಿಯ ತುರ್ತು ಸಭೆ ಕರೆದು ದಿನದ ಕೊನೆಗೆ ಒಂದು ಪರಿಹಾರ ಹುಡುಕಿತು. ಮರುದಿನ ಬೆಳಗ್ಗೆ ಆರ್ ಬಿಐ ಮತ್ತು ಸೆಬಿಯ ಅಧಿಕಾರಿಗಳು ಬೆಳಗ್ಗೆ 8 ಗಂಟೆಗೆ ಸಭೆ ನಡೆಸಿ 14 ದಿನಗಳ ವಿಶೇಷ ರೆಪೊ ಸೌಲಭ್ಯವನ್ನು ಆರ್ ಬಿಐ ಘೋಷಿಸಿ ಹೆಚ್ಚುವರಿ ಶೇಕಡಾ 0.5ರಷ್ಟು ಎನ್ ಡಿಎಲ್ ಗೆ ಅನುವು ಮಾಡಿಕೊಟ್ಟಿತು. ಹೀಗೆ ಅಂದು ಸಮಸ್ಯೆ ಬಗೆಹರಿಯಿತು ಎಂದು ಚಿದಂಬರಂ ಹೇಳಿದ್ದಾರೆ.
Advertisement