ಬೆಂಗಳೂರು: 41 ನೇಯ ಜಿಎಸ್ ಟಿ ಕೌನ್ಸಿಲ್ ಸಭೆಯನ್ನು ಆಗಸ್ಟ್ 27, 2020 ರಂದು ನಿಗದಿಪಡಿಸಲಾಗಿದ್ದು, ಈ ಸಭೆಯಲ್ಲಿ ‘ರಾಜ್ಯಗಳಿಗೆ ಪರಿಹಾರ ನೀಡುವ’ ಬಗ್ಗೆ ಚರ್ಚಿಸಬೇಕಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ, ಆರ್ಥಿಕ ತಜ್ಞರು ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ “ಪರಿಹಾರ ಸೆಸ್(Compensation CESS)” ಅನ್ನು ಹೆಚ್ಚುವರಿಯಾಗಿ ವಿಧಿಸಲು ಒತ್ತಾಯ ಮಾಡುತ್ತಿದ್ದಾರೆ.
ರಾಜ್ಯಗಳಿಗೆ ಜಿಎಸ್ ಟಿ ಅನುಷ್ಠಾನ ದಿಂದ ಆದಾಯ ತೆರಿಗೆಯಲ್ಲಿ ಉಂಟಾಗುವ ನಷ್ಟದ ಪರಿಹಾರಕ್ಕಾಗಿ “ಪರಿಹಾರ ಸೆಸ್” ಅನ್ನು ವಿಧಿಸಿ ಜಾರಿಗಳಿಸುವ ಕಡೆ ಗಮನಹರಿಸಬೇಕಾಗಿದೆ. ಕೊರೊನಾ ವೈರಸ್ ನಿಂದಾಗಿ ಆರ್ಥಿಕ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು “ಪರಿಹಾರ ಸೆಸ್” ಸಂಗ್ರಹಣೆಗೆ ತೀವ್ರ ಹೊಡೆತ ಬಿದ್ದಿದೆ.
ಆರ್ಥಿಕ ತಜ್ಞ ಹಾಗು ಆರೋಗ್ಯ ನೀತಿ ವಿಶ್ಲೇಷಕರಾದ ಡಾ. ರಿಜೋ ಜಾನ್ ರವರು “ಕೊರೊನಾ ಮಹಾ ಮಾರಿಯಿಂದ ದೇಶದ ಆರ್ಥಿಕ ಸ್ಥಿತಿಗೆ ಉಂಟಾದ ಆಘಾತದಿಂದ ಹೊರಬರಲು ಅಸಾಧಾರಣ ಆರ್ಥಿಕ ಸಂಪನ್ಮೂಲಗಳ ಅಗತ್ಯವಿದೆ. ಈ ಸಂದರ್ಭದಲ್ಲಿ ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಪರಿಹಾರ ಸೆಸ್ ವಿಧಿಸುವುದರಿಂದ ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ.
ಒಂದು ಬೀಡಿಗೆ ರೂ. 1 ರಂತೆ, ಒಂದು ಸಿಗರೇಟಿಗೆ ರೂ. 5 ರಂತೆ ಹಾಗೂ ಹೊಗೆರಹಿತ/ಜಗಿಯುವ ತಂಬಾಕುಗಳ ಮೇಲೆ 52% ರಷ್ಟು ಹೆಚ್ಚುವರಿ ಪರಿಹಾರ ಸೆಸ್ ಅನ್ನು ವಿಧಿಸಿದಲ್ಲಿ ರೂ. 50,000 ಕೋಟಿಯಷ್ಟು ಹೆಚ್ಚುವರಿ ಆದಾಯ ತೆರಿಗೆಯನ್ನು ಸಂಗ್ರಹಿಸಬಹುದಾಗಿ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಎಸ್. ವೆಂಕಟೇಶ್, ಹಿರಿಯ ಹೃದ್ರೋಗ ತಜ್ಞರು, ಆಸ್ಟರ್ ಆರ್ ವಿ ಆಸ್ಪತ್ರೆ ಹಾಗೂ ತಂಬಾಕು ನಿಯಂತ್ರಣ ಅಡ್ವೊಕೇಟ್ ಪ್ರಕಾರ –“ತಂಬಾಕು ಬಳಕೆದಾರರಲ್ಲಿ ರೋಗ ನಿರೋದಕ ಶಕ್ತಿ ಕುಂಠಿತಗೊಂಡಿದ್ದು ಕೋರೊನಾ ಸೋಂಕಿನ ಅಪಾಯಕ್ಕೆ ಈಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೋವಿಡ್–19 ರ ವಿರುದ್ದ ರಾಜ್ಯವು ಹೋರಾಡುತ್ತಿರುವ ಸಂದರ್ಭದಲ್ಲಿ ಸಿಗರೇಟ್, ಬೀಡಿ ಹಾಗೂ ಇತರ ತಂಬಾಕು ಉತ್ಪನ್ನಗಳ ಮೇಲೆ ಪರಿಹಾರ ಸೆಸ್ ಅನ್ನು ವಿಧಿಸುವುದು ಅತ್ಯಗತ್ಯವಾಗಿದೆ. ಇದರಿಂದ ತಂಬಾಕು ಉತ್ಪನ್ನಗಳನ್ನು ಖರೀದಿಸುವ ಸಾಮರ್ಥ್ಯ ಕಡಿಮೆಗೊಳಿಸುವುದರೊಂದಿಗೆ ಸೋಂಕು ಹರಡುವುದನ್ನು ಕಡಿಮೆಗೊಳಿಸುತ್ತದೆ ಹಾಗು ಸರಕಾರಕ್ಕೆ ಅವಶ್ಯಕವಿರುವ ತೆರಿಗೆಯ ಸಂಗ್ರಹಣೆಯಾಗುತ್ತದೆ.
Advertisement