ನವದೆಹಲಿ: ತೈಲ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಬ್ರಿಟಾನಿಯಾ, ಐಟಿಸಿ, ನೆಸ್ಲೆಯಂತಹ ಗ್ರಾಹಕ ಸರಕು ಕಂಪನಿಗಳು ಉತ್ಪನ್ನಗಳ ಬೆಲೆ ಏರಿಸಲು ಮುಂದಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಹಾಲು, ಸೂರ್ಯಕಾಂತಿ ಎಣ್ಣೆ, ಗೋಧಿ, ಸಕ್ಕರೆಯಂತಹ ಕಚ್ಚಾ ಸಾಮಾಗ್ರಿಗಳ ದರ ಹೆಚ್ಚಾಗಿದ್ದು, ಕಂಪನಿಗಳು ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಬಹುದು ಅಥವಾ ಪ್ಯಾಕ್ ಗಾತ್ರವನ್ನು ಕಡಿಮೆ ಮಾಡಬಹುದಾಗಿದೆ.
ಸಾಮಾನ್ಯ ಪ್ರಮಾಣದಲ್ಲಿ ಬೆಲೆ ಏರಿಸಲು ಪ್ರಯತ್ನಿಸಲಾಗುತ್ತಿದೆ. ಬೆಳವಣಿಗೆಯನ್ನಾಧರಿಸಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ನೆಸ್ಲೆ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯ ನಾರಾಯಣ ತಿಳಿಸಿದ್ದಾರೆ.
ಗ್ರಾಹಕರ ಅನುಭೋಗ ವೆಚ್ಚ ಹೆಚ್ಚಾದರೆ ಸ್ವಲ್ಪ ಪ್ರಮಾಣದಲ್ಲಿ ನೆರವಾಗುತ್ತದೆ. ಆದರೆ, ಆಹಾರ ಹಣದುಬ್ಬದರಿಂದ ಅದು ಸಾಧ್ಯವಿಲ್ಲ. ಸೂರ್ಯಕಾಂತಿ ಎಣ್ಣೆ, ಗೋಧಿಹಿಟ್ಟು ಸಕ್ಕರೆ ಯಂತಹ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಬಿಸ್ಕಟ್ ಬೆಲೆಯಲ್ಲಿ ಶೇ. 3 ರಿಂದ 6 ರಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗೋಧಿ ಹಿಟ್ಟಿನ ಬೆಲೆ ವರ್ಷದಿಂದ ವರ್ಷಕ್ಕೆ ಬೇರೆ ಬೇರೆಯಾಗುತ್ತಾ ಸಾಗಿದೆ. ದಕ್ಷಿಣದಲ್ಲಿ ಕೆಜಿ ಗೋಧಿ ಹಿಟ್ಟನ್ನು 24 ರೂಪಾಯಿಗೆ ಮಾರಾಟ ಮಾಡಿದರೆ ಉತ್ತರ ಭಾರತದಲ್ಲಿ ಸ್ವಲ್ಪ ಕಡಿಮೆ ಇದೆ. ಸಣ್ಣ ಮತ್ತು ಮಧ್ಯಮ ತಯಾರಿಕರಿಗೆ ಹೆಚ್ಚುವರಿ ಮತ್ತು ನಿರ್ವಹಣಾ ವೆಚ್ಚಗಳನ್ನು ಹಾಕಲಾಗುತ್ತದೆ ಎನ್ನುವ ಕೈಗಾರಿಕಾ ಕಾರ್ಯನಿರ್ವಹಕರು, ದೊಡ್ಡ ಪ್ಯಾಕ್ ಗಳಿಗೆ ಬೆಲೆ ಹೆಚ್ಚಳ ಮಾಡಲಾಗುವುದು ಇಲ್ಲವೇ ಪ್ಯಾಕ್ ಗಳಲ್ಲಿ ಒಂದಿಷ್ಟು ಗ್ರಾಂ ಕಡಿಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಶೇ. 35ಕ್ಕೂ ಹೆಚ್ಚು ಹೆಚ್ಚಳ ಮಾಡಲಾಗಿದ್ದು, ಅಮುಲ್ , ಮದರ್ ಡೈಲಿ ಹಾಲಿನ ಬೆಲೆಯಲ್ಲೂ ಹೆಚ್ಚಳ ಮಾಡಲಾಗಿದೆ. ರಾಜ್ಯಗಳಲ್ಲಿ ಪ್ರತಿ ಲೀಟರ್ ಗೆ 2 ರೂಪಾಯಿಯಂತೆ ಅಮೂಲ್ ಬೆಲೆ ಹೆಚ್ಚಳ ಮಾಡಿದ್ದರೆ ದೆಹಲಿಯಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ 3 ರೂಪಾಯಿವರೆಗೂ ಮದರ್ ಡೈರಿ ಬೆಲೆ ಹೆಚ್ಚಳ ಮಾಡಿದೆ. ಮತ್ತೊಂದು ಕಡೆ ಕಳೆದ ಎರಡು ತಿಂಗಳಲ್ಲಿ ತಾಳೆ ಎಣ್ಣೆ ಬೆಲೆಯಲ್ಲಿ ಶೇ. 30 ರಷ್ಟು ಹೆಚ್ಚಳವಾಗಿದೆ.
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸೂರ್ಯ ಕಾಂತಿ ಎಣ್ಣೆ ತಯಾರಿಕೆಯ ಕಂಪನಿಗಳು ಅಲ್ಪ ಬೆಲೆ ಹೆಚ್ಚಳ ಮಾಡಿವೆ. ಬ್ರೇಡ್ ತಯಾರಿಕಾ ಕಂಪನಿಗಳು ಕೂಡಾ ಇದೇ ರೀತಿಯಲ್ಲಿ ಬೆಲೆ ಹೆಚ್ಚಿಸಿವೆ. ಹಣದುಬ್ಬರದ ಒತ್ತಡದಿಂದಾಗಿ ಮುಂದಿನ ಎರಡು ವಾರಗಳಲ್ಲಿ ಶೇ. 7 ರಿಂದ 12 ರಷ್ಟು ಬೆಲೆ ಹೆಚ್ಚಳ ಮಾಡಲು ಪರಿಗಣಿಸಲಾಗಿದೆ ಎಂದು ಅಖಿಲ ಭಾರತ ಬ್ರೇಡ್ ತಯಾರಿಕಾರ ಅಸೋಸಿಯೇಷನ್ ತಿಳಿಸಿದೆ.
Advertisement