ನವದೆಹಲಿ: ಕೊರೋನಾ ವೈರಸ್ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ವಲಸೆ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಪರಿಹಾರ ಪ್ಯಾಕೇಜ್ ಅನ್ನು ಪ್ರಕಟಿಸಿದ್ದಾರೆ.
ಇಂದು 9 ಪ್ರಮುಖ ನಿರ್ಧಾರಗಳನ್ನು ಘೋಷಿಸಲಾಗುವುದು. ಅದರಲ್ಲಿ ಮೂರು ವಲಸೆ ಕಾರ್ಮಿಕರಿಗೆ, ಒಂದು ಮುದ್ರಾದೊಂದಿಗೆ ಶಿಶು ಸಾಲ, ಮತ್ತೊಂದು ರಸ್ತೆ ಬದಿಯ ವ್ಯಾಪಾರಿಗಳಿಗೆ, ಮತ್ತೊಂದು ಗೃಹ, 1 ಬುಡಕಟ್ಟು ಜನಾಂಗದ ಉದ್ಯೋಗ ಪೀಳಿಗೆಗೆ ಹಾಗೂ ಎರಡು ನಿರ್ಧಾರಗಳು ಸಣ್ಣ ರೈತರನ್ನು ಒಳಗೊಂಡಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ನೀಡಿದರು.
ಕಳೆದ ಮೂರು ತಿಂಗಳಿನಿಂದ ದೇಶದ ರೈತ ಸಮುದಾಯಕ್ಕೆ ಅನುಕೂಲವಾಗುವಂತ ಹಲವು ಯೋಜನೆಗಳನ್ನು ಘೋಷಿಸಲಾಗಿದ್ದು, ಸಣ್ಣ ರೈತರಿಗೆ 4 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಹೊಸದಾಗಿ 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಮಂಜೂರು ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಸಕಾಲದಲ್ಲಿ ಸಾಲ ಮರುಪಾವತಿಸಿರುವ ರೈತರಿಗೆ ಮೇ 31ರವರೆಗೆ ಬಡ್ಡಿ ರಿಯಾಯಿತಿ ನೀಡಲಾಗುವುದು. ಸಣ್ಣ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವ ವ್ಯವಸ್ಥೆ ರೂಪಿಸಲಾಗುವುದು ಎಂದರು.
ವಲಸೆ ಕಾರ್ಮಿಕರು ಸುರಕ್ಷಿತವಾಗಿ ಮನೆ ತಲುಪಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಈಗಾಗಲೇ ಅವರಿಗೆ ಎರಡು ತಿಂಗಳ ಉಚಿತ ರೇಷನ್ ನೀಡುವ ಘೋಷಣೆ ಮಾಡಲಾಗಿದೆ ಎಂದರು.
5 ಕೆಜಿ ಅಕ್ಕಿ ಅಥವಾ ಗೋದಿ, 1 ಕೆಜಿ ಬೆಳೆಕಾಳುಗಳು ಸೇರಿದಂತೆ ಉಚಿತ ರೇಷನ್ ನೀಡಲಾಗುತ್ತಿದ್ದು, ಇದರಿಂದ 8 ಕೋಟಿ ವಲಸೆ ಕಾರ್ಮಿಕರಿಗೆ ಅನುಕೂಲವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ವಲಸೆ ಕಾರ್ಮಿಕರಿಗಾಗಿ 11 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗುವುದು. ಬೀದಿ ಬದಿಯ ವ್ಯಾಪಾರಿಗಳಿಗಾಗಿ ಪ್ರತ್ಯೇಕ ಪ್ಯಾಕೇಜ್ ಪ್ರಕಟಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಕ್ಕಾಗಿ 4,200 ಕೊಟಿ ಹಂಚಿಕೆ ಮಾಡಲಾಗುವುದು.
ವಲಸೆ ಕಾರ್ಮಿಕರಿಗೆ ಎಲ್ಲ ರೀತಿಯಲ್ಲೂ ನೆರವಾಗಲು ಪ್ರಯತ್ನ ನಡೆಸಲಾಗುವುದು. ಪಟ್ಟಣ ಪ್ರದೇಶಗಳಲ್ಲಿ ಬಡ ಕಾರ್ಮಿಕರಿಗಾಗಿ 3 ಕೋಟಿ ಮುಖಗವುಸು ಪೂರೈಸಲಾಗುವುದು. ವಲಸೆ ಕಾರ್ಮಿಕರಿಗೆ ಮೂರು ಹೊತ್ತು ಆಹಾರ ಒದಗಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು. ಈ ಸಂಬಂಧ ನೆರವು ಶಿಬಿರ ಆಯೋಜಿಸಲಾಗುವುದು. ಭೋಜನ ವ್ಯವಸ್ಥೆಗೆ 11 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ವಲಸೆ ಕಾರ್ಮಿಕರು ಈಗ ಇರುವಲ್ಲಿಯೇ ಹೊಸದಾಗಿ ನೋಂದಣಿ ಮಾಡಿಕೊಂಡು ಉಪಯೋಗ ಪಡೆಯಬಹುದು. ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಪ್ರದೇಶಗಳ ಕಾರ್ಮಿಕರಿಗೆ ವ್ಯವಸ್ಥೆ ಮಾಡಿರುವ ವಸತಿ ಶಿಬಿರಗಳಲ್ಲಿ ಮೂರು ಹೊತ್ತು ಭೋಜನ ಒದಗಿಸಲಿದ್ದೇವೆ. ದೇಶಾದ್ಯಂತ ಒಂದೇ ಮಾದರಿ ಕೂಲಿ ದರ ಇರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಎಲ್ಲ ವಲಸೆ ಕಾರ್ಮಿಕರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು, ಅವರೆಲ್ಲರಿಗೂ ವಿಮಾ ಸೌಲಭ್ಯ ಕಲ್ಪಿಸಲಾಗುವುದು. ಬುಡಕಟ್ಟು ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಪ್ಯಾಕೇಜ್ ವಿವರಗಳು:
Advertisement