ನವದೆಹಲಿ:ಇನ್ನು ಮುಂದೆ ಎಲ್ಲಾ ವಲಯಗಳಲ್ಲಿ ಖಾಸಗಿ ಕಂಪೆನಿಗಳಿಗೆ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಲಿದೆ ಎಂದು ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೊಸ ಆತ್ಮನಿರ್ಭರ ಭಾರತ ಯೋಜನೆ ಹೊಸ ಸಾರ್ವಜನಿಕ ವಲಯ ಉದ್ಯಮ ನೀತಿಯ ಮೇಲೆ ನಿಂತಿದೆ. ಕಾರ್ಯತಂತ್ರ ಕ್ಷೇತ್ರಗಳಲ್ಲಿ, ಕನಿಷ್ಠ ಒಂದು ಉದ್ಯಮವು ಸಾರ್ವಜನಿಕ ವಲಯದಲ್ಲಿ ಉಳಿಯುತ್ತದೆ ಇದರ ಜೊತೆಗೆ ಖಾಸಗಿ ವಲಯಕ್ಕೂ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಹಣ ಪಾವತಿಸಿಲ್ಲ ಎಂದು ದೋಷಿಗಳ ಪಟ್ಟಿಗೆ ಸೇರಿಸುವುದಿಲ್ಲ: ಕೋವಿಡ್-19ನಿಂದ ಸಾಲಕ್ಕೊಳಗಾದವರನ್ನು ಹಣ ಪಾವತಿ ಮಾಡದವರು ಎಂದು ದೋಷಿಗಳ ಪಟ್ಟಿಯಲ್ಲಿ ಸೇರಿಸುವುದಿಲ್ಲ. ಕಂಪೆನಿ ಕಾಯ್ದೆಯಡಿ ಕಂಪೆನಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಕೋವಿಡ್-19 ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಕಂಪೆನಿಗಳ ಮಂಡಳಿ ಸಭೆಯನ್ನು ಆನ್ ಲೈನ್ ನಲ್ಲಿ ನಡೆಸಲಾಗುವುದು. ಹಕ್ಕುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಡಿಜಿಟಲ್ ಮೂಲಕ ನಿರ್ಣಯಿಸಲಾಗುವುದು. ಕಾರ್ಪೊರೇಟ್ ಆಡಳಿತದಲ್ಲಿ ಪ್ರಮುಖ ಸುಧಾರಣೆಗಳನ್ನು ತರಲಾಗುವುದು ಎಂದರು.
ಮನ್ರೇಗಾ ಯೋಜನೆಗೆ 40 ಸಾವಿರ ಕೋಟಿ ರೂ: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 40 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುವುದು. ಕೋವಿಡ್ 19ನ ಲಾಕ್ ಡೌನ್ ಕಾರಣದಿಂದ ಸಾವಿರಾರು ಮಂದಿ ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿಗೆ ಹೋಗಿದ್ದಾರೆ. ಇಂಥವರಿಗೆ ತಮ್ಮ ಊರುಗಳಲ್ಲಿ ಉದ್ಯೋಗ ಕಂಡುಕೊಂಡು ಜೀವನೋಪಾಯಕ್ಕಾಗಿ ಮನ್ರೇಗಾ ಯೋಜನೆಗೆ 40 ಸಾವಿರ ಕೋಟಿ ರೂಪಾಯಿ ವಿನಿಯೋಗಿಸಲಾಗುವುದು ಎಂದರು.
ಜಿಲ್ಲಾಸ್ಪತ್ರೆಗಳಲ್ಲಿ ಕೊರೋನಾ ಸೋಂಕು ಚಿಕಿತ್ಸಾ ಕೇಂದ್ರಗಳು: ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಯೋಗಾಲಯ ಸಂಪರ್ಕ ಕೇಂದ್ರಗಳ ವ್ಯವಸ್ಥೆ ಸರಿಯಾಗಿಲ್ಲ, ಹೀಗಾಗಿ ಜನರ ಅನುಕೂಲಕ್ಕೆ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳನ್ನು ಬ್ಲಾಕ್ ಮಟ್ಟದಲ್ಲಿ ನಿರ್ಮಿಸಲಾಗುವುದು. ಕ್ಲಿನಿಕ್ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನು ತಳಮಟ್ಟದಲ್ಲಿಯೇ ಅಭಿವೃದ್ಧಿಪಡಿಸಲು ಹೂಡಿಕೆ ಮಾಡಲಾಗುವುದು. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕೆ ಒತ್ತು ಕೊಡಲಾಗುವುದು.
ಪ್ರಧಾನ ಮಂತ್ರಿಗಳ ಇ-ವಿದ್ಯಾ ಯೋಜನೆಯಡಿ ಕೇಂದ್ರದ ಪ್ರಮುಖ 100 ವಿಶ್ವವಿದ್ಯಾಲಯಗಳಲ್ಲಿ ಮೇ 30ರಿಂದ ಆನ್ ಲೈನ್ ತರಗತಿಗಳನ್ನು ಆರಂಭಿಸಲಾಗುವುದು.
Advertisement