ಲಾಕ್‌ಡೌನ್ ಸಡಿಲಿಕೆ ನಂತರ ಚೇತರಿಕೆಯಾಗುತ್ತಿರುವ ಸಂಪನ್ಮೂಲ ಕ್ರೂಢೀಕರಣ: ಆದಾಯದಲ್ಲಿ ಏರಿಕೆ 

ಡೌನ್ ಹಿನ್ನೆಲೆ ರಾಜ್ಯದ ಆರ್ಥಿಕ ಸಂಪನ್ಮೂಲ ಬಹುತೇಕ ಬರಿದಾಗಿತ್ತು. ಆದರೆ ಈಗ ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ನಿಧಾನವಾಗಿ ರಾಜ್ಯದ ಬೊಕ್ಕಸ ಚೇತರಿಸಿಕೊಳ್ಳುವತ್ತ ಸಾಗಿದೆ. 
ಲಾಕ್‌ಡೌನ್ ಸಡಿಲಿಕೆ ನಂತರ ಚೇತರಿಕೆಯಾಗುತ್ತಿರುವ ಸಂಪನ್ಮೂಲ ಕ್ರೂಢೀಕರಣ: ಆದಾಯದಲ್ಲಿ ಏರಿಕೆ 

ಬೆಂಗಳೂರು: ಲಾಕ್ ಡೌನ್  ಹಿನ್ನೆಲೆ ರಾಜ್ಯದ ಆರ್ಥಿಕ ಸಂಪನ್ಮೂಲ ಬಹುತೇಕ ಬರಿದಾಗಿತ್ತು. ಆದರೆ ಈಗ ಲಾಕ್ ಡೌನ್ ಸಡಿಲಗೊಳಿಸಿದ ಪರಿಣಾಮ ನಿಧಾನವಾಗಿ ರಾಜ್ಯದ ಬೊಕ್ಕಸ ಚೇತರಿಸಿಕೊಳ್ಳುವತ್ತ ಸಾಗಿದೆ. 

ಎರಡೂವರೆ ತಿಂಗಳ ಲಾಕ್ ಡೌನ್ ನಿಂದಾಗಿ ರಾಜ್ಯದ ಬೊಕ್ಕಸ ಬರಿದಾಗಿತ್ತು. ಇದನ್ನು ಮನಗಂಡ ರಾಜ್ಯ ಸರ್ಕಾರ ಲಾಕ್ ಡೌನ್ 3.O ಘೋಷಣೆ ಯಾದಾಗ ಹಂತಹಂತ ವಾಗಿ ಆರ್ಥಿಕ ಚಟುವಟಿಕೆಗಳಿಗೆ ಅನುವುಮಾಡಿಕೊಟ್ಟಿತು. ಪರಿಣಾಮ ಲಾಕ್ ಡೌನ್ 4.O ವೇಳೆಗೆ ರಾಜ್ಯ ಸರ್ಕಾರ ಬಹುತೇಕ ಚುಟುವಟಿಕೆಗಳಿಗೆ ನಿಯಮ ಸಡಿಲಿಕೆ ಮಾಡಲಾಯಿತು. 
   
2020-21 ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್ ನಲ್ಲಿ ಲಾಕ್ ಡೌನ್ ಪರಿಣಾಮ ರಾಜ್ಯದ ತೆರಿಗೆ ಸಂಗ್ರಹವಾಗಿರಲಿಲ್ಲ. ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಬಳಿಕ ನಿಯಮಾವಳಿ ಸಡಿಲಿಕೆ ಬಳಿಕ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಬರುವ ಆದಾಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ನಿಧಾನಗತಿಯಲ್ಲಿ ಸಂಪನ್ಮೂಲ ಹರಿದುಬರುತ್ತಿದೆ. 

ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಚೇತರಿಕೆ: ಲಾಕ್ ಡೌನ್ ಸಡಿಲಿಕೆಯಾದ ಬಳಿಕ ರಾಜ್ಯಾದ್ಯಂತ ಆರ್ಥಿಕ ಚಟುವಟಿಕೆಗಳು ಪುನರಾ ರಂಭಗೊಂಡಿದೆ. ಆ ಮೂಲಕ ರಾಜ್ಯದ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಈ ತಿಂಗಳಾಂತ್ಯಕ್ಕೆ ಗಣನೀಯ ಏರಿಕೆ ಕಾಣಲಿದೆ. ಈಗಾಗಲೇ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಕಾಣುತ್ತಿದ್ದು, ಮುಂದಿನ ವಾರಗಳಲ್ಲಿ ಮತ್ತಷ್ಟು ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಕಂಡುಬರಲಿದೆ. ಸಾಮಾನ್ಯವಾಗಿ ಮಾಸಿಕ ಸುಮಾರು 1750 ಕೋಟಿ ರೂ. ಜಿಎಸ್ ಟಿ ತೆರಿಗೆ ಸಂಗ್ರಹವಾಗುತ್ತದೆ. ಇದೀಗ ಲಾಕ್ ಡೌನ್ ಸಡಿಲಿಕೆಯಾದ ಕಾರಣ ತಿಂಗಳಾಂತ್ಯಕ್ಕೆ ಸುಮಾರು 500 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. 

ಮಾರಾಟ ತೆರಿಗೆ ಸಂಗ್ರಹದಲ್ಲೂ ಚೇತರಿಕೆ ಇತ್ತ ಖಾಸಗಿ ವಾಹನ, ಓಲಾ, ಉಬರ್,ಟ್ಯಾಕ್ಸಿಗಳ ಓಡಾಟ, ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದ್ದರಿಂದ ಇಂಧನ ಮೇಲಿನ ಮಾರಾಟ ತೆರಿಗೆಯಲ್ಲೂ ಈ ತಿಂಗಳಲ್ಲಿ ಭಾರೀ ವೃದ್ಧಿಯಾಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬಳಕೆ ಹೆಚ್ಚಾಗಿರುವುದರಿಂದ ಅದರ ಮೇಲಿನ ಮಾರಾಟ ತೆರಿಗೆ ರೂಪದಲ್ಲಿ ಮೇ ತಿಂಗಳಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 300 ಕೋಟಿ ರೂ. ಬರುವ ನಿರೀಕ್ಷೆ ಹೊಂದಿದೆ. ಜಿಎಸ್ ಟಿ ತೆರಿಗೆ, ಮಾರಾಟ ತೆರಿಗೆ ಸೇರಿ ಒಟ್ಟು ವಾಣಿಜ್ಯ ತೆರಿಗೆ ಮೂಲಕ ಸರ್ಕಾರ ವಾರ್ಷಿಕ ಅಂದಾಜು 82,443 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಿದೆ. ಅಬಕಾರಿ ತೆರಿಗೆಯ ಸಂಗ್ರಹದಲ್ಲೂ ಗಣನೀಯ ಏರಿಕೆ :ಮದ್ಯ ಮಾರಾಟಕ್ಕೆ ಅನುವು ಮಾಡಿದ ಬಳಿಕ ಅಬಕಾರಿ ತೆರಿಗೆಯಲ್ಲೂ ಸರ್ಕಾರದ ಬೊಕ್ಕಸ ಗಣನೀಯವಾಗಿ ತುಂಬುತ್ತಿದೆ. ಪ್ರಾರಂಭದಲ್ಲಿ ಮದ್ಯ ಮಾರಾಟ ಚುರುಕು ಪಡೆದಿತ್ತು.ಬಳಿಕ ಶೇ 17ರಷ್ಟು ತೆರಿಗೆ ಹೆಚ್ಚಳದಿಂದ ಮದ್ಯ ಮಾರಾಟ ಸಾಮಾನ್ಯ ಹಂತಕ್ಕೆ ತಲುಪಿದೆ. ಆದರೆ ವಾರಾಂತ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಮತ್ತಷ್ಟು ಖರೀದಿಯಲ್ಲಿ ಹೆಚ್ಚಳ ಕಂಡು ಬರುವ ಸಾಧ್ಯತೆ ಇದೆ. ಮೇ 20 ವರೆಗೆ ಅಬಕಾರಿ ತೆರಿಗೆ ಮೂಲಕ ಸರ್ಕಾರ ಸುಮಾರು 1200 ಕೋಟಿ ರೂ.ಆದಾಯ ಸಂಗ್ರಹಿಸಿದೆ. ಮೇ ಅಂತ್ಯಕ್ಕೆ ಸುಮಾರು ಇನ್ನೂ 400 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ಅಬಕಾರಿ ತೆರಿಗೆ ಮೂಲಕ ಸರ್ಕಾರ ವಾರ್ಷಿಕ ಅಂದಾಜು ಸುಮಾರು 22,700 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಿದೆ.

ಮುದ್ರಾಂಕ ಮತ್ತು ನೋಂದಣಿ ಸುಧಾರಣೆಯತ್ತ: ಇತ್ತ ರಾಜ್ಯಾದ್ಯಂತ ಮುದ್ರಾಂಕ ಹಾಗೂ ನೋಂದಣಿ ಕಚೇರಿಗಳೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿ ರ್ವಹಿಸುತ್ತಿದ್ದು, ಮುದ್ರಾಂಕ ಹಾಗೂ ನೋಂದಣಿ ಶುಲ್ಕದಲ್ಲೂ ಗಣನೀಯ ಚೇತರಿಕೆ ಕಾಣುತ್ತಿದೆ.ಪ್ರತಿ ದಿನ ಸುಮಾರು 18 ಕೋಟಿ ರೂ. ವರೆಗೆ ಆದಾಯ ಸಂಗ್ರಹವಾಗುತ್ತಿದೆ. ಏಪ್ರಿಲ್ ನಿಂದ ಮೇ 21 ರ ವೆರೆಗೆ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ರೂಪದಲ್ಲಿ ಸರ್ಕಾರ ಸುಮಾರು 203 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕದ ಮೂಲಕ ವಾರ್ಷಿಕ ಅಂದಾಜು ಸುಮಾರು 12,655 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ಇಲಾಖೆ ಹೊಂದಿದೆ. ಆದಾಯ ಸಂಗ್ರಹದ ಸುಧಾರಣೆಗೆ ಸರ್ಕಾರ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆದಾಯ ಸಂಗ್ರಹದಲ್ಲಿ ಚೇತರಿಕೆ ಕಾಣಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಯುಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com