ಅತಿದೊಡ್ಡ ಬ್ಯಾಂಕ್ ವಂಚನೆ ಕೇಸ್: ಇಬ್ಬರು ಬಿಲ್ಡರ್‌ಗಳ 415 ಕೋಟಿ ರೂ. ಮೌಲ್ಯದ ಆಸ್ತಿ ವಶ

ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದಲ್ಲಿ ಉದ್ಯಮಿಗಳಾದ ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸಲೆ ಅವರಿಗೆ ಸೇರಿದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಅವಿನಾಶ್ ಭೋಸಲೆ-ಸಂಜಯ್ ಛಾಬ್ರಿಯಾ
ಅವಿನಾಶ್ ಭೋಸಲೆ-ಸಂಜಯ್ ಛಾಬ್ರಿಯಾ

ನವದೆಹಲಿ: ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದಲ್ಲಿ ಉದ್ಯಮಿಗಳಾದ ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸಲೆ ಅವರಿಗೆ ಸೇರಿದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಆರೋಪದಡಿ ಮಹಾರಾಷ್ಟ್ರ ಮೂಲದ ಬಿಲ್ಡರ್‌ನ ಆಸ್ತಿಯಿಂದ ಅಗಸ್ಟಾವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ವಶಪಡಿಸಿಕೊಂಡ ಕೆಲವೇ ದಿನಗಳ ನಂತರ, ಜಾರಿ ನಿರ್ದೇಶನಾಲಯ  ಭಾರತದ ಅತಿದೊಡ್ಡ ಬ್ಯಾಂಕ್‌ಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಲ್ಡರ್‌ ಗಳಿಂದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ  34,000 ಕೋಟಿಗೂ ಹೆಚ್ಚು ನಷ್ಟ ಉಂಟು ಮಾಡಿದ ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ (ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್) ಪ್ರಕರಣದಲ್ಲಿ ರೇಡಿಯಸ್ ಡೆವಲಪರ್ಸ್‌ನ ಸಂಜಯ್ ಛಾಬ್ರಿಯಾ ಮತ್ತು ಎಬಿಐಎಲ್ ಇನ್‌ಫ್ರಾಸ್ಟ್ರಕ್ಚರ್‌ನ ಅವಿನಾಶ್ ಭೋಸಲೆ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.

ಕೇಂದ್ರೀಯ ತನಿಖಾ ದಳ ಅಥವಾ ಸಿಬಿಐ ಅಧಿಕಾರಿಗಳು ಕಳೆದ ವಾರ ಪುಣೆಯಲ್ಲಿರುವ ಅವಿನಾಶ್ ಭೋಸಲೆ ಆಸ್ತಿಯಲ್ಲಿ ಹೆಲಿಕಾಪ್ಟರ್ ಅನ್ನು ಪತ್ತೆ ಮಾಡಿದ್ದರು.

ಇಂದು ಸಂಜಯ್ ಛಾಬ್ರಿಯಾಗೆ ಸೇರಿದ ಮುಂಬೈನ ಸಾಂತಾಕ್ರೂಜ್‌ನಲ್ಲಿರುವ  116.5 ಕೋಟಿ ರೂ. ಮೌಲ್ಯದ ಜಮೀನು, ಬೆಂಗಳೂರಿನಲ್ಲಿರುವ  115 ಕೋಟಿ ರೂ. ಮೌಲ್ಯದ ಲ್ಯಾಂಡ್‌ ಪಾರ್ಸೆಲ್‌ನಲ್ಲಿರುವ  ಛಾಬ್ರಿಯಾ ಕಂಪನಿಯ 25% ಈಕ್ವಿಟಿ ಷೇರುಗಳು, 3 ಕೋಟಿ ರೂ. ಮೌಲ್ಯದ ಸಾಂತಾಕ್ರೂಜ್‌ನಲ್ಲಿರುವ ಮತ್ತೊಂದು ಫ್ಲಾಟ್,  ದೆಹಲಿ ವಿಮಾನ ನಿಲ್ದಾಣದಲ್ಲಿ  13.67 ಕೋಟಿ ರೂ. ಮೌಲ್ಯದ ಹೋಟೆಲ್‌ನಿಂದ ಬರುವ ಲಾಭ. 3.10 ಕೋಟಿ. ರ ಮೌಲ್ಯದ ಸಂಜಯ್ ಛಾಬ್ರಿಯಾ ಅವರಿಗೆ ಸೇರಿದ ಮೂರು ಅತ್ಯಾಧುನಿಕ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದಲ್ಲದೆ, ಅವಿನಾಶ್ ಭೋಸಲೆ ಅವರ  102.8 ಕೋಟಿ ರೂ. ಮೌಲ್ಯದ ಮುಂಬೈನ ಡ್ಯೂಪ್ಲೆಕ್ಸ್ ಫ್ಲಾಟ್ ಆಸ್ತಿ, ಪುಣೆಯಲ್ಲಿ  14.65 ಕೋಟಿ ರೂ. ಮೌಲ್ಯದ ಜಮೀನು, ಪುಣೆಯಲ್ಲಿ  29.24 ಕೋಟಿ ರೂ. ಮೌಲ್ಯದ ಮತ್ತೊಂದು ಜಮೀನು, 15.52 ಕೋಟಿ ರೂ. ಮೌಲ್ಯದ ನಾಗ್ಪುರದ ಜಮೀನು ಮತ್ತು ನಾಗ್ಪುರದಲ್ಲಿರುವ  1.45 ಕೋಟಿ ರೂ. ಮೌಲ್ಯದ ಮತ್ತೊಂದು ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿಕೊಂಡಿದೆ.

ಇವರಿಬ್ಬರ ವಿರುದ್ಧ 2002ರ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (PMLA) ನಿಬಂಧನೆಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಇವರಷ್ಟೇ ಅಲ್ಲದೇ , ಯೆಸ್ ಬ್ಯಾಂಕ್ ಸಹ-ಸಂಸ್ಥಾಪಕ ರಾಣಾ ಕಪೂರ್ ಮತ್ತು ಡಿಎಚ್‌ಎಫ್‌ಎಲ್ ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ಅವರ ವಿರುದ್ಧವೂ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ವಾಧವನ್‌ರನ್ನು ಮೇ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದರೆ, ಕಪೂರ್‌ರನ್ನು ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು. ಇಬ್ಬರು ಬಿಲ್ಡರ್‌ಗಳಂತೆ ಇವರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com