ಲಖನೌ: ಉತ್ತರ ಪ್ರದೇಶದಲ್ಲಿ ವಿವಿಧ ವಲಯಗಳಲ್ಲಿ 75,000 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಶುಕ್ರವಾರ ಘೋಷಿಸಿದ್ದಾರೆ.
ಇಂದು ಲಖನೌದಲ್ಲಿ ನಡೆದ ಯುಪಿ ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಐಎಸ್)ದಲ್ಲಿ ಮಾತನಾಡಿದ ಮುಖೇಶ್ ಅಂಬಾನಿ, ತಮ್ಮ ಇತ್ತೀಚಿನ ಹೂಡಿಕೆಯು ರಾಜ್ಯದಲ್ಲಿ ಸುಮಾರು 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
2018 ರ ನಂತರ ರಿಲಯನ್ಸ್ ಗ್ರೂಪ್ ಉತ್ತರ ಪ್ರದೇಶದಲ್ಲಿ ಈಗಾಗಲೇ ಬದ್ಧವಾಗಿರುವ 50,000 ಕೋಟಿ ರೂಪಾಯಿಗಳ ಜೊತೆಗೆ ಹೊಸ ಹೂಡಿಕೆಯ ಭಾಗವಾ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಮುಖೇಶ್ ಅಂಬಾನಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸುವರ್ಣ ಕಾಲ ಈಗಷ್ಟೇ ಆರಂಭವಾಗಿದೆ ಎಂದ ಅಂಬಾನಿ, ಜಾಗತಿಕ ಹೂಡಿಕೆದಾರರ ಸಮಾವೇಶ "ವಿಕಾಸ್ ಕಾ ಮಹಾಕುಂಭ್(ಅಭಿವೃದ್ಧಿಯ ಸಭೆ)" ಎಂದು ಕರೆದರು.
ಡಿಸೆಂಬರ್ 2023ರ ವೇಳೆಗೆ ತಮ್ಮ ಕಂಪನಿಯು 5G ಮೊಬೈಲ್ ಸೇವೆಗಳನ್ನು ಉತ್ತರ ಪ್ರದೇಶದ ಪ್ರತಿ ಪಟ್ಟಣ ಮತ್ತು ಹಳ್ಳಿಗೆ ವಿಸ್ತರಿಸಲಿದೆ ಎಂದು ಅವರು ಅಂಬಾನಿ ಘೋಷಿಸಿದರು.
ಬಳಿಕ ಮಾತನಾಡಿದ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರು, ಉತ್ತರ ಪ್ರದೇಶದಲ್ಲಿ ಸಿಮೆಂಟ್, ಲೋಹಗಳು, ರಾಸಾಯನಿಕ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಸುಮಾರು 25,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದರು. "ಭಾರತ ತನ್ನ 5-ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ಉತ್ತರ ಪ್ರದೇಶ ಅತ್ಯಗತ್ಯ" ಎಂದು ಅವರು ಹೇಳಿದರು.
Advertisement