ಪಶ್ಚಿಮ ಏಷ್ಯಾ ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಅನಿವಾರ್ಯವಾಗಬಹುದು: RBI ಗವರ್ನರ್

ಪ್ರಸ್ತುತ ಜಾಗತಿಕ ಇಂಧನ ಸಂಕಷ್ಟ ಮತ್ತಷ್ಟು ತೀವ್ರಗೊಂಡರೆ ಸರ್ಕಾರವು ಚಿಲ್ಲರೆ ಇಂಧನ ಬೆಲೆಗಳನ್ನು ಅನಿಯಮಿತವಾಗಿ ಸ್ಥಿರವಾಗಿರಿಸಲು ಸಾಧ್ಯವಾಗುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.
Sanjay Malhotra
ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ
Updated on

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದೀರ್ಘಕಾಲ ಮುಂದುವರಿದರೆ ಭಾರತವು ಕೊನೆಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಏರುತ್ತಿರುವ ಕಚ್ಚಾ ತೈಲದ ಬೆಲೆಗಳು ದರ ಏರಿಕೆ, ಇಂಧನ ಆಮದುಗಳು ಹಾಗೂ ಒಟ್ಟಾರೆ ಆರ್ಥಿಕತೆಯ ಮೇಲೆ ಒತ್ತಡವನ್ನು ಮುಂದುವರಿಸುತ್ತಿವೆ.

ಪ್ರಸ್ತುತ ಜಾಗತಿಕ ಇಂಧನ ಸಂಕಷ್ಟ ಮತ್ತಷ್ಟು ತೀವ್ರಗೊಂಡರೆ ಸರ್ಕಾರವು ಚಿಲ್ಲರೆ ಇಂಧನ ಬೆಲೆಗಳನ್ನು ಅನಿಯಮಿತವಾಗಿ ಸ್ಥಿರವಾಗಿರಿಸಲು ಸಾಧ್ಯವಾಗುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಇದು ಇನ್ನೂ ದೀರ್ಘಕಾಲ ಮುಂದುವರಿದರೆ, ಸರ್ಕಾರವು ಬೆಲೆ ಏರಿಕೆಯ ಕೆಲವು ಭಾಗವನ್ನು ಜನರ ಮೇಲೆ ವರ್ಗಾಯಿಸುವುದು ಪರಿಸ್ಥಿತಿಯ ಪ್ರಶ್ನೆಯಾಗಿರುತ್ತದೆ ಎಂದು ಮಲ್ಹೋತ್ರಾ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ Swiss National Bank ಮತ್ತು International Monetary Fund ಆಯೋಜಿಸಿದ್ದ ಸಮ್ಮೇಳನದಲ್ಲಿ ಹೇಳಿದರು.

ಹಾರ್ಮುಜ್ ಜಲಸಂಧಿ ಸಂಕಷ್ಟದಿಂದ ಭಾರತದ ಇಂಧನ ಆಮದಿಗೆ ಹೊಡೆತ

ಜಗತ್ತಿನ ಮೂರನೇ ಅತಿದೊಡ್ಡ ತೈಲ ಬಳಕೆದಾರ ರಾಷ್ಟ್ರವಾದ ಭಾರತವು, ಹಾರ್ಮುಜ್ ಜಲಸಂಧಿ ಸುತ್ತಲಿನ ಉದ್ವಿಗ್ನತೆಯಿಂದ ಇಂಧನ ಸರಬರಾಜು ವ್ಯತ್ಯಯಗೊಂಡು ಕಚ್ಚಾ ತೈಲದ ಬೆಲೆಗಳು ತೀವ್ರ ಏರಿಕೆಯಾದ ನಂತರ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿದೆ.

ಈ ಪ್ರಮುಖ ಸಾಗಾಟ ಮಾರ್ಗದ ಅಡಚಣೆಯಿಂದ ಸರಬರಾಜು ಸರಪಳಿ ವ್ಯತ್ಯಯ, ದರ ಏರಿಕೆ ಹಾಗೂ ಭಾರತದ ಹೆಚ್ಚುತ್ತಿರುವ ಇಂಧನ ಆಮದು ಬೆಲೆ ಬಗ್ಗೆ ಆತಂಕಗಳು ಮೂಡಿವೆ.

ಭಾರತ ತನ್ನ ತೈಲ ಅಗತ್ಯಗಳ ಬಹುಪಾಲನ್ನು ಆಮದು ಮಾಡಿಕೊಳ್ಳುವುದರಿಂದ, ಕಚ್ಚಾ ತೈಲದ ಬೆಲೆ ಏರಿಕೆ ದೇಶಕ್ಕೆ ದೊಡ್ಡ ಚಿಂತೆಯ ವಿಷಯವಾಗಿದೆ. ತೈಲದ ಬೆಲೆ ಏರಿಕೆಯಿಂದ ಸಾರಿಗೆ ಮತ್ತು ಉತ್ಪಾದನಾ ವೆಚ್ಚಗಳು ಹೆಚ್ಚುತ್ತವೆ, ರೂಪಾಯಿ ಮೇಲೆ ಒತ್ತಡ ಉಂಟಾಗುತ್ತದೆ ಹಾಗೂ ದರ ಏರಿಕೆಗೆ ಕಾರಣವಾಗುತ್ತದೆ.

ಸದ್ಯಕ್ಕೆ ವೆಚ್ಚ ಹೊರುತ್ತಿರುವ ಸರ್ಕಾರ ಮತ್ತು ತೈಲ ಕಂಪನಿಗಳು

ಪ್ರಸ್ತುತ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಚ್ಚಾ ತೈಲದ ಬೆಲೆ ಏರಿಕೆಯ ಬಹುಪಾಲು ವೆಚ್ಚವನ್ನು ತಾವೇ ಭರಿಸುತ್ತಿವೆ.

ಇಂಧನ ಮೇಲಿನ ಅಬಕಾರಿ ಸುಂಕವನ್ನು ಈಗಾಗಲೇ ಕಡಿತಗೊಳಿಸಲಾಗಿದ್ದು, ತೈಲ ಮಾರುಕಟ್ಟೆ ಕಂಪನಿಗಳು ನಷ್ಟಗಳು ಹೆಚ್ಚುತ್ತಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿವೆ.

ಆದರೆ ಕೆಲವು ಇಂಧನ ಉತ್ಪನ್ನಗಳ ಬೆಲೆಗಳು ಈಗಾಗಲೇ ಏರಿಕೆಯಾಗಿದೆ.

Sanjay Malhotra
Gold Tariffs: ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಕೇಂದ್ರ ಕ್ರಮ; ಚಿನ್ನ-ಬೆಳ್ಳಿ ಆಮದು ಸುಂಕ ಶೇ.15ಕ್ಕೆ ಏರಿಕೆ

ಸರ್ಕಾರಿ ಇಂಧನ ಮಾರಾಟಗಾರರು ಈ ಕೆಳಗಿನ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ

  • ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್‌ಗಳು

  • ಕೈಗಾರಿಕಾ ಡೀಸೆಲ್

  • 5 ಕೆಜಿ ಎಲ್ ಪಿಜಿ ಸಿಲಿಂಡರ್‌ಗಳು

  • ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಪೂರೈಕೆ ಮಾಡುವ ಜೆಟ್ ಇಂಧನ

19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇತ್ತೀಚೆಗೆ 993 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಆದರೆ ಚಿಲ್ಲರೆ ಪೆಟ್ರೋಲ್, ಡೀಸೆಲ್ ಮತ್ತು ಗೃಹ ಬಳಕೆಯ ಎಲ್ ಪಿಜಿ ಬೆಲೆಗಳು ಸದ್ಯಕ್ಕೆ ಬದಲಾಗಿಲ್ಲ.

ಇಂಧನ ಉಳಿಸಲು ಪ್ರಧಾನಿ ಮೋದಿ ಮನವಿ

ಈ ಬೆಳವಣಿಗೆಗಳು, ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಲು ಜನರು ಸ್ವಯಂಪ್ರೇರಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು ಹಾಗೂ ಅನಗತ್ಯ ಚಿನ್ನ ಖರೀದಿ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಕೆಲವೇ ದಿನಗಳ ನಂತರ ನಡೆದಿವೆ.

ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ಇತ್ತೀಚೆಗೆ, ಇಂಧನ ಬೆಲೆಗಳನ್ನು ಸ್ಥಿರವಾಗಿರಿಸಿಕೊಂಡು ತೈಲ ಕಂಪನಿಗಳು ಇನ್ನೆಷ್ಟು ಕಾಲ ನಷ್ಟವನ್ನು ಭರಿಸಬಲ್ಲವು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು.

ಹೆಚ್ಚಿನ ತೈಲ ಬೆಲೆಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಐಎಂಎಫ್ ಬೆಂಬಲ

ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡ ಹೆಚ್ಚಿದ ಕಚ್ಚಾ ತೈಲದ ಬೆಲೆಗಳನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಬೆಂಬಲಿಸಿದ್ದು, ಪ್ರಸ್ತುತ ಇಂಧನ ಸಂಕಷ್ಟವನ್ನು ಎದುರಿಸಲು ಭಾರತಕ್ಕೆ ಇನ್ನೂ ಸಾಮರ್ಥ್ಯವಿದೆ ಎಂದು ಹೇಳಿದೆ.

ಭಾರತದ ಇಂಧನ ಮಾರುಕಟ್ಟೆ ಬಹುಪಾಲು ಸರ್ಕಾರಿ ಸ್ವಾಮ್ಯದ ರಿಫೈನರಿಗಳ ನಿಯಂತ್ರಣದಲ್ಲಿದ್ದು, ದೇಶದ ಸುಮಾರು 90 ಶೇಕಡಾ ಚಿಲ್ಲರೆ ಇಂಧನ ಮಳಿಗೆಗಳನ್ನು ಅವು ನಿರ್ವಹಿಸುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಣಾಮಕಾರಿಯಾಗಿ ಕೇಂದ್ರ ಸರ್ಕಾರವೇ ಅನುಮೋದಿಸುತ್ತದೆ, ಆದರೆ ರಾಜ್ಯ ತೆರಿಗೆಗಳು ವಿಭಿನ್ನವಾಗಿರುತ್ತವೆ.

ಭಾರತದ ಚಿಲ್ಲರೆ ದರ ಏರಿಕೆ ಏಪ್ರಿಲ್‌ನಲ್ಲಿ 3.40 ಶೇಕಡಾದಿಂದ 3.48 ಶೇಕಡಾಕ್ಕೆ ಏರಿಕೆಯಾದರೂ, ಸರ್ಕಾರವು ಕಚ್ಚಾ ತೈಲದ ಬೆಲೆ ಏರಿಕೆಯ ಒಂದು ಭಾಗವನ್ನು ತಾನೇ ಭರಿಸಿದ್ದರಿಂದ ನಿರೀಕ್ಷೆಗಿಂತ ಕಡಿಮೆಯೇ ಉಳಿಯಿತು.

Sanjay Malhotra
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ರೂಪಾಯಿ ಮೌಲ್ಯ ಮತ್ತೆ ಕುಸಿತ; ಇದು ಸಾರ್ವಕಾಲಿಕ ಪತನ!

ಆರ್ಥಿಕ ತಜ್ಞರು ಏನಂತಾರೆ

  • ದೀರ್ಘಕಾಲ ತೈಲದ ಬೆಲೆಗಳು ಹೆಚ್ಚಾಗಿದ್ದರೆ ದರ ಏರಿಕೆ ಮತ್ತಷ್ಟು ಹೆಚ್ಚಾಗಬಹುದು

  • ಆರ್ಥಿಕ ಬೆಳವಣಿಗೆ ನಿಧಾನಗೊಳ್ಳಬಹುದು

  • ರೂಪಾಯಿ ಮೌಲ್ಯ ದುರ್ಬಲವಾಗಬಹುದು

  • ಪ್ರಚಲಿತ ಖಾತೆ ಕೊರತೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಆರ್‌ಬಿಐ ಪ್ರಸ್ತುತ ಹಣಕಾಸು ವರ್ಷಕ್ಕೆ 6.9 ಶೇಕಡಾ ಆರ್ಥಿಕ ಬೆಳವಣಿಗೆ ಮತ್ತು ಸರಾಸರಿ 4.6 ಶೇಕಡಾ ದರ ಏರಿಕೆಯನ್ನು ಅಂದಾಜಿಸಿದೆ.

ಕೇಂದ್ರ ಬ್ಯಾಂಕ್ ಏಪ್ರಿಲ್‌ನಲ್ಲಿ ರೆಪೊ ದರವನ್ನು 5.25 ಶೇಕಡಾದಲ್ಲಿಯೇ ಸ್ಥಿರವಾಗಿರಿಸಿತು. ಸಂಜಯ್ ಮಲ್ಹೋತ್ರಾ ಅವರ ಪ್ರಕಾರ, ಆರ್‌ಬಿಐ ಈಗ ಹೆಚ್ಚು ಮಾಹಿತಿ ಆಧಾರಿತ ನಿಲುವು ಅನುಸರಿಸುತ್ತಿದ್ದು, ದರ ಏರಿಕೆಯ ಒತ್ತಡಗಳು ದೀರ್ಘಕಾಲ ಉಳಿದರೆ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com