ಹಿರಿಯ ಬಾಲಿವುಡ್ ನಟ ಶ್ರೀರಾಮ್ ಲಾಗೂ ವಿಧಿವಶ, ಪ್ರಧಾನಿ ಮೋದಿ ಸಂತಾಪ

ಸುಪ್ರಸಿದ್ಧ ನಟ, ರಂಗಕರ್ಮಿ ಡಾ. ಶ್ರೀರಾಮ್ ಲಾಗೂ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ತೀವ್ರ ಸಂತಾಪ ಸೂಚಿಸಿದ್ದಾರೆ.
ಹಿರಿಯ ಬಾಲಿವುಡ್ ನಟ ಶ್ರೀರಾಮ್ ಲಾಗೂ ವಿಧಿವಶ, ಪ್ರಧಾನಿ ಮೋದಿ ಸಂತಾಪ
ಹಿರಿಯ ಬಾಲಿವುಡ್ ನಟ ಶ್ರೀರಾಮ್ ಲಾಗೂ ವಿಧಿವಶ, ಪ್ರಧಾನಿ ಮೋದಿ ಸಂತಾಪ

ನವದೆಹಲಿ:  ಸುಪ್ರಸಿದ್ಧ ನಟ, ರಂಗಕರ್ಮಿ ಡಾ. ಶ್ರೀರಾಮ್ ಲಾಗೂ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ತೀವ್ರ ಸಂತಾಪ ಸೂಚಿಸಿದ್ದಾರೆ.

ಡಾ. ಶ್ರೀರಾಮ್ ಲಾಗೂ ಅವರೊಬ್ಬ ಬಹುಮುಖ ಪ್ರತಿಭಾವಂತ ಮತ್ತು ಅದ್ಭುತ ವ್ಯಕ್ತಿಯಾಗಿದ್ದರು. ತಮ್ಮ ಅಸಾಧಾರಣ ನಟನೆಯಿಂದ ಹಲವು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದರು. ರಂಗಭೂಮಿ ಹಾಗೂ ಸಿನಿಮಾ ರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ದೇಶ ಸದಾ ನೆನಪಿಟ್ಟುಕೊಳ್ಳಲಿದೆ. ಅವರ ನಿಧನದಿಂದ ತಮಗೆ ತೀವ್ರ ದುಃಖವಾಗಿದೆ ಎಂದು ಪ್ರಧಾನಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸುಪ್ರಸಿದ್ದ ರಂಗಕರ್ಮಿ, ಚಲನ ಚಿತ್ರ ನಟ ಶ್ರೀರಾಮ್ ಲಾಗೂ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಮಂಗಳವಾರ ರಾತ್ರಿ ಪುಣೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

1927 ರಲ್ಲಿ ಸತಾರಾದಲ್ಲಿ ಜನಿಸಿದ ಮರಾಠಿ ರಂಗಭೂಮಿ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಶ್ರೀರಾಮ್ ವೃತ್ತಿಯಲ್ಲಿ ವೈದ್ಯರಾಗಿದ್ದರು. "ಏಕ್ ದಿನ ಅಚಾನಕ್", "ಘರೋಂಡಾ", "ಮುಕದ್ದಾರ್ ಕಾ ಸಿಕಂದರ್" "ಲಾವಾರಿಸ್"" ಸೇರಿ ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿ ಜನರ ಮನಗೆದ್ದಿದ್ದರು. 

ಅವರು ರಿಚರ್ಡ್ ಅಟೆನ್ಬರೋ ಅವರ "ಗಾಂಧಿ" ಚಿತ್ರದಲ್ಲಿ ಗೋಪಾಲ್ ಕೃಷ್ಣ ಗೋಖಲೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಲಾಗೂ ಮಹಾರಾಷ್ಟ್ರದಲ್ಲಿ ನಾಟಕ ಚಳುವಳಿಯ ಬೆಳವಣಿಗೆಯಲ್ಲಿ ವಿಜಯ್ ತೆಂಡೂಲ್ಕರ್, ವಿಜಯ ಮೆಹ್ತಾ ಮತ್ತು ಅರವಿಂದ್ ದೇಶಪಾಂಡೆ ಅವರೊಂದಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಲಾಗೂ ತಾವು 40 ವರ್ಷದವರೆಗೆ ಚಿತ್ರನಟರಾಗಿ ಪ್ರಸಿದ್ದಿ ಹೊಂದಿರಲಿಲ್ಲ. ವೈದ್ಯರಾಗಿದ್ದ ಅವರು  ಕೀನ್ಯಾದ ಆಸ್ಪತ್ರೆಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು ಬಳಿಕ ವೈದ್ಯ ವೃತ್ತಿ ತ್ಯಜಿಸಿ  ಪೂರ್ಣಾವಧಿ ನಟರಾಗಿದ್ದರು. ವಿ ಶಾಂತಾರಾಮ್ ಅವರ "ಪಿಂಜ್ರಾ" (1972) ಚಿತ್ರದೊಂದಿಗೆ ಅವರ ಚಿತ್ರಜೀವನ ಪ್ರಾರಂಭವಾಗಿತ್ತು,

ಮೃತರು ಪತ್ನಿ ದೀಪಾ, ಮಗ ಡಾ. ಆನಂದ ಲಾಗೂ ಮಗಳು ಡಾ. ಬಿಂಬಾ ಕಾನಿಟ್ಕರ್ ಅವರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಪುತ್ರ ತನ್ವೀರ್ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com