ಮುಂಬೈ: ಕೌನ್ ಬನೇಗಾ ಕರೋಡ್ಪತಿ(ಕೆಬಿಸಿ)ಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಶನಿವಾರ ಕ್ಷಮೆಯಾಚಿಸಿದ್ದಾರೆ.
ಕಳೆದ ನವೆಂಬರ್ 6ರಂದು ಪ್ರಸಾರವಾದ ಕೆಬಿಸಿಯಲ್ಲಿ 'ಈ ನಾಯಕರಲ್ಲಿ ಯಾರು ಮೊಘಲ್ ಸಾಮ್ರಾಟ ಔರಂಗಜೇಬ್ಗೆ ಸಮಕಾಲೀನರು?' ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಮಹಾರಾಜ ಪ್ರತಾಪ್, ರಾಣಾ ಸಂಗ, ಮಹಾರಾಜ ರಂಜಿತ್ ಸಿಂಗ್, ಶಿವಾಜಿ ಎಂಬ 4 ಆಯ್ಕೆಗಳನ್ನು ಕೊಡಲಾಗಿತ್ತು.
ಈ ಪ್ರಶ್ನೆಯಿಂದ ಮರಾಠಿಗರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಟ್ವಿಟ್ಟರ್ನಲ್ಲಿ #BoycuttKBC ಎಂಬ ಅಭಿಯಾನ ಶುರುವಾಗಿತ್ತು. ಈ ಪ್ರಶ್ನೆಯ ಸ್ಕ್ರೀನ್ಶಾಟ್ ಹಾಕಿ ಅನೇಕರು ಖಾಸಗಿ ವಾಹಿನಿ ಮತ್ತು ಅಮಿತಾಭ್ ಬಚ್ಚನ್ ವಿರುದ್ಧ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಮೊಘಲ್ ರಾಜ ಔರಂಗಜೇಬ್ಗೆ ಸಾಮ್ರಾಟ ಎಂದು ಕರೆದಿರುವ ಆಯೋಜಕರು, ಆಯ್ಕೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಎಂದು ಬರೆಯುವ ಬದಲು ಕೇವಲ ಶಿವಾಜಿ ಎಂದು ಬರೆಯುವ ಮೂಲಕ ಅವಮಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.
ಇಂದು ಈ ಕುರಿತು ಟ್ವೀಟ್ ಮಾಡಿರುವ ಬಿಗ್ ಬಿ, ಛತ್ರಪತಿ ಶಿವಾಜಿ ಮಹಾರಾಜ್ ಗೆ ಯಾವುದೇ ಕಾರಣಕ್ಕೂ
ಅಗೌರವ ತೋರುವುದಿಲ್ಲ. ಇದರಿಂದ ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
Advertisement