ಮುಂಬೈ: ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ಕುರಿತಂತೆ ಚಿತ್ರವೊಂದನ್ನು ಮಾಡುತ್ತೇನೆ ಎಂದು ಬಾಲಿವುಡ್ ನ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಘೋಷಣೆ ಮಾಡಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುರಿತಂತೆ ಅರ್ನಬ್ ಅವರ ರಿಪಬ್ಲಿಕ್ ಸುದ್ದಿವಾಹಿನಯಲ್ಲಿ ಪ್ರಸಾರವಾದ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಮ್ ಗೋಪಾಲ್ ವರ್ಮಾ, ಬಾಲಿವುಡ್ ಕುರಿತಂತೆ ಅರ್ನಬ್ ಗೋಸ್ವಾಮಿ ತುಂಬಾ ಆಘಾತಕಾರಿಯಾಗಿ ಮಾತನಾಡುತ್ತಿದ್ದಾರೆ. ಚಿತ್ರರಂಗವನ್ನು ಅತ್ಯಂತ ಕೊಳಕಿನ ಉದ್ಯಮ ಎಂದು ಕರೆಯುವ ಮೂಲಕ ಅವರು ಇಡೀ ಚಿತ್ರರಂಗಕ್ಕೆ ಅವಮಾನ ಮಾಡಿದ್ದಾರೆ. ಬಾಲಿವುಡ್ ಅಪರಾಧ ಸಂಪರ್ಕಗಳನ್ನು ಹೊಂದಿರುವ ಉದ್ಯಮ, ಇದು ಅತ್ಯಾಚಾರಿಗಳು, ದರೋಡೆಕೋರರು, ಲೈಂಗಿಕ ಶೋಷಕರಿಂದ ತುಂಬಿದೆ ಎಂದೆಲ್ಲಾ ಟೀಕಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಂತೆಯೇ ಸುಶಾಂತ್ ಸಿಂಗ್ ರಜಪೂತ್ ಸಾವನ್ನು ಅರ್ನಬ್ ಟಿಆರ್ ಪಿಯ ಟೂಲ್ (ಪರಿಕರ) ಆಗಿ ಬಳಕೆ ಮಾಡುತ್ತಿದ್ದು, ಅರ್ನಬ್ ಸುಳ್ಳುಸುದ್ದಿಗಳಿಗೆ ಹೆದರಿ ಬಾಲಿವುಡ್ ನ ಖ್ಯಾತನಾಮರಾದ ಆದಿತ್ಯಾ ಚೋಪ್ರಾ, ಶಾರುಖ್ ಖಾನ್, ಸಲ್ಮಾನ್ ಖಾನ್, ಸೇರಿದಂತೆ ಹಲವರು ಮೌನವಹಿಸಿದ್ದಾರೆ. ಮಾಧ್ಯಮಗಳೂ ಇಡೀ ಉದ್ಯಮವನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದು, ಸಿನಿಮಾ ಉದ್ಯಮದಲ್ಲಿರುವವರನ್ನು ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಎಂಬಂತೆ ಬಿಂಬಿಸುತ್ತಿವೆ ಎಂದು ರಾಮ್ ಗೋಪಾಲ್ ವರ್ಮಾ ಕಿಡಿಕಾರಿದ್ದಾರೆ.
ಅಲ್ಲದೆ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ತಾವು ಸಿನಿಮಾ ಮಾಡುವುದಾಗಿ ಆರ್ ಜಿವಿ ಘೋಷಣೆ ಮಾಡಿದ್ದು, ಆ ಚಿತ್ರಕ್ಕೆ ಅರ್ನಬ್ ಎಂಗು ಹೆಸರಿಟ್ಟು, 'ದಿ ನ್ಯೂಸ್ ಪ್ರಾಸ್ಟಿಟ್ಯೂಟ್' ಅಡಿ ಬರಹ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಅರ್ನಬ್ ಗೋಸ್ವಾಮಿ ಬೇಕಿದ್ದರೆ ನನ್ನ ಚಿತ್ರವನ್ನು ತಡೆಯಲು ಪ್ರಯತ್ನಿಸಲಿ. ಅದನ್ನೂ ಕೂಡ ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳುತ್ತೇನೆ ಎಂದು ಆರ್ ಜಿವಿ ಟ್ವೀಟ್ ಮಾಡಿದ್ದಾರೆ.
Advertisement