ನವದೆಹಲಿ: ಕಂಗನಾ ರಣಾವತ್ ಬಾಲಿವುಡ್ ನಲ್ಲಿರುವ ಸ್ವಜನ ಪಕ್ಷಪಾತದ ಬಗ್ಗೆ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಇತ್ತೀಚೆಗಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣದ ಬೆನ್ನಲ್ಲೂ ಆಕೆ ಬಾಲಿವುಡ್ ನ ಸ್ವಜನ ಪಕ್ಷಪಾತದ ಬಗ್ಗೆ ಮಾತನಾಡಿದ್ದರು.
ಈ ಬಗ್ಗೆ ಸುಶಾಂತ್ ಸಿಂಗ್ ರಜ್ಪೂತ್ ಅವರ ಸಾವಿನ ಪ್ರಕರಣದಲ್ಲಿ ಆತನ ಕುಟುಂಬ ಸದಸ್ಯರನ್ನು ಪ್ರತಿನಿಧಿಸುತ್ತಿರುವ ವಕೀಲ ವಿಕಾಸ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಕಂಗನಾ ರಣಾವತ್ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತೆಯೂ ಅಲ್ಲ, ಪ್ರತಿನಿಧಿಯೂ ಅಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಅಸ್ತಿತ್ವದಲ್ಲಿರುವ ಸ್ವಜನ ಪಕ್ಷಪಾತದ ಬಗ್ಗೆ ಕಂಗನಾ ಸಮಾನ್ಯವಾಗಿ ಮಾತನಾಡಿದ್ದಾರಷ್ಟೇ, ಅವರು ಪ್ರಶ್ನಿಸುತ್ತಿರುವ ಸಂಗತಿಗಳು ಸರಿಯಾಗಿದೆ ಆದರೆ ಆಕೆ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೂ ಅಲ್ಲ. ಸಿನಿಮಾ ಕ್ಷೇತ್ರದಲ್ಲಿರುವ ಸಾಮಾನ್ಯ ಸಮಸ್ಯೆಗಳನ್ನಷ್ಟೇ ಅವರು ಹೇಳಿದ್ದಾರೆಂದು ವಕೀಲರು ತಿಳಿಸಿದ್ದಾರೆ.
ಜೂ.14 ರಂದು ಸುಶಾಂತ್ ಸಿಂಗ್ ಸಾವನ್ನಪ್ಪಿದ್ದಾಗ ವಿಡಿಯೋ ಅಪ್ ಲೋಡ್ ಮಾಡಿದ್ದ ನಟಿ ಕಂಗನಾ, ಮೂವಿ ಮಾಫಿಯಾ, ನೆಪೋ-ಕಿಡ್ಸ್ ಬಗ್ಗೆ ಮಾತನಾಡಿದ್ದರು. ಈ ಮೂಲಕ ಮತ್ತೆ ನೆಪೋಟಿಸಮ್ ಚರ್ಚೆ ಮುನ್ನೆಲೆಗೆ ಬಂದಿತ್ತು. ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿದಾಗಲೂ ಕಂಗನಾ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದರು.
Advertisement