ಮುಂಬೈ: 2013ರಲ್ಲಿ ಲೈಂಗಿಕ ಹಲ್ಲೆ ಮತ್ತು ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿ ಬಾಲಿವುಡ್ ನಟಿ ಪಾಯಲ್ ಘೋಷ್ ದಾಖಲಿಸಿರುವ ಎಫ್ಐಆರ್ ಗೆ ಸಂಬಂಧಿಸಿದಂತೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸಮ್ಮನ್ಸ್ ಜಾರಿ ಮಾಡಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಮುಂಬೈಯ ವರ್ಸೊವ ಪೊಲೀಸ್ ಸ್ಟೇಷನ್ ಗೆ ವಿಚಾರಣೆಗೆ ಹಾಜರಾಗುವಂತೆ ಸಮ್ಮನ್ಸ್ ಜಾರಿ ಮಾಡಲಾಗಿದೆ.ವರ್ಸೊವಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ 376(ಐ), 354, 341 ಮತ್ತು 342ರಡಿ ಕೇಸು ದಾಖಲಿಸಿದ್ದಾರೆ.
ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಪಾಯಲ್ ಘೋಷ್ ಬೆದರಿಕೆ ಹಾಕಿದ ನಂತರ ಈ ಬೆಳವಣಿಗೆ ನಡೆದಿದೆ. ಎಫ್ ಐಆರ್ ದಾಖಲಾದರೂ ಅನುರಾಗ್ ಕಶ್ಯಪ್ ಅವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಅವರನ್ನು ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿದ್ದರು.
ಈ ಪ್ರಕರಣದಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ಅವರ ಮಾಜಿ ಪತ್ನಿಯರು ಸೇರಿದಂತೆ ಬಾಲಿವುಡ್ ನ ಅನೇಕ ಕಲಾವಿದರು ಬೆಂಬಲ ಸೂಚಿಸಿದ್ದಾರೆ.
Advertisement