ಬಾಲಿವುಡ್ ನಟ ಶಾರುಖ್ ಖಾನ್ ಮನೆಯ ಮೇಕಪ್ ರೂಂ ನಲ್ಲಿ 8 ಗಂಟೆ ಅವಿತಿದ್ದ ಆಗಂತುಕರು!

ಬಾಲಿವುಡ್ ನಟ ಶಾರುಖ್ ಖಾನ್ ಮನೆಗೆ ಆಗಂತುಕರು ನುಗ್ಗಿದ್ದು ಸುಮಾರು 8 ಗಂಟೆಗಳ ಕಾಲ ಶಾರುಖ್ ನಿವಾಸ್ ಮನ್ನತ್ ನ ಮೇಕಪ್ ರೂಂ ನಲ್ಲಿ ಅಪರಿಚತರು ಅವಿತಿದ್ದರು ಎಂದು ತಿಳಿದುಬಂದಿದೆ.
ಶಾರುಖ್ ಖಾನ್ ನಿವಾಸ ಮನ್ನತ್
ಶಾರುಖ್ ಖಾನ್ ನಿವಾಸ ಮನ್ನತ್

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಮನೆಗೆ ಆಗಂತುಕರು ನುಗ್ಗಿದ್ದು ಸುಮಾರು 8 ಗಂಟೆಗಳ ಕಾಲ ಶಾರುಖ್ ನಿವಾಸ್ ಮನ್ನತ್ ನ ಮೇಕಪ್ ರೂಂ ನಲ್ಲಿ ಅಪರಿಚತರು ಅವಿತಿದ್ದರು ಎಂದು ತಿಳಿದುಬಂದಿದೆ.

ಶಾರುಖ್ ಖಾನ್ ಮನೆಗೆ ಆಗಂತುಕರು ನುಗ್ಗಿದ್ದ ವಿಚಾರವನ್ನು ಸ್ವತಃ ಶಾರುಖ್ ಖಾನ್ ರ ಮ್ಯಾನೇಜರ್ ಬಹಿರಂಗ ಪಡಿಸಿದ್ದು, ಕಳೆದ ವಾರ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಕಳೆದ ವಾರ ಮುಂಬೈನ ಬಾಂದ್ರಾ ಬ್ಯಾಂಡ್‌ ಸ್ಟ್ಯಾಂಡ್‌ನಲ್ಲಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಮನ್ನತ್ ಬಂಗಲೆಗೆ ಇಬ್ಬರು ಅಪರಿಚತರು ಅಕ್ರಮವಾಗಿ ಪ್ರವೇಶಿಸಿದ್ದರು. ಆರೋಪಿಗಳಿಬ್ಬರೂ ಶಾರುಖ್ ಖಾನ್ ಅವರನ್ನು ಭೇಟಿಯಾಗಲು ಅವರ ಬಂಗಲೆಗೆ ರಹಸ್ಯವಾಗಿ ಪ್ರವೇಶಿಸಿದ್ದರು ಎನ್ನಲಾಗಿದೆ.

ಮೂಲಗಳ ಪ್ರಕಾರ ಸುಮಾರು 8 ಗಂಟೆಗಳ ಕಾಲ ಶಾರುಖ್ ಖಾನ್ ಅವರ ಪರ್ಸನಲ್ ಮೇಕಪ್ ರೂಂನಲ್ಲಿ ಈ ಇಬ್ಬರು ಆರೋಪಿಗಳು ಕಾಯುತ್ತಿದ್ದರು ಎನ್ನಲಾಗಿದೆ. ವಿಚಾರ ಬಹಿರಂಗವಾದಾಗ ಇಬ್ಬರನ್ನೂ ಮುಂಬೈನ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಶಾರುಖ್ ಮ್ಯಾನೇಜರ್ ಪೊಲೀಸ್ ದೂರು ನೀಡಿದ್ದಾರೆ. ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ಮ್ಯಾನೇಜರ್ ಕಾಲಿನ್ ಡಿಸೋಜಾ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಬಂಗಲೆಯಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿ ಫೆಬ್ರವರಿ 2 ರಂದು ಬೆಳಿಗ್ಗೆ 11 ಗಂಟೆಗೆ ತನಗೆ ಕರೆ ಮಾಡಿ ಇಬ್ಬರು ಬಂಗಲೆಗೆ ಪ್ರವೇಶಿಸಿದ್ದಾರೆ ಎಂದು ಹೇಳಿದರು. ಇಬ್ಬರೂ ಆರೋಪಿಗಳು ಶಾರುಖ್ ಅವರ ಬಂಗಲೆಯ ಮೂರನೇ ಮಹಡಿಯಲ್ಲಿರುವ ಮೇಕಪ್ ಕೋಣೆಗೆ ತಲುಪಿದ್ದರು ಮತ್ತು ರಾತ್ರಿ 3 ರಿಂದ ಬೆಳಿಗ್ಗೆ 10:30 ರವರೆಗೆ ಶಾರುಖ್ ಖಾನ್ ಗಾಗಿ ಕಾಯುತ್ತಿದ್ದರು ಎಂದು ದೂರುನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳಿಬ್ಬರೂ ಗುಜರಾತ್‌ನ ಭರೂಚ್‌ ನಿವಾಸಿಗಳು ಎಂದು ತಿಳಿದುಬಂದಿದೆ. ಪೊಲೀಸ್ ಎಫ್‌ಐಆರ್ ಪ್ರಕಾರ, ಮನ್ನತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸತೀಶ್ ಎಂಬಾತ ಶಾರುಖ್ ಖಾನ್ ಅವರ ಮೇಕಪ್ ರೂಂ ಅನ್ನು ಸ್ವಚ್ಛಗೊಳಿಸಲು ಅಲ್ಲಿಗೆ ಬಂದಾಗ, ಈ ಇಬ್ಬರು ಅಲ್ಲಿ ಅಡಗಿಕೊಂಡಿದ್ದನ್ನು ನೋಡಿದ್ದಾರೆ. ಅದರ ನಂತರ ಸತೀಶ್ ಅವರಿಬ್ಬರನ್ನೂ ಹಿಡಿದು ಅಲ್ಲಿಂದ ಮನೆಯ ಲಾಬಿಗೆ ಕರೆದೊಯ್ದಿದ್ದಾರೆ. ಆಗ ಮಾತ್ರ ಶಾರುಖ್ ಖಾನ್ ಈ ಇಬ್ಬರನ್ನು ನೋಡಿ ಇದ್ದಕ್ಕಿದ್ದಂತೆ ಆಘಾತಕ್ಕೊಳಗಾದರು. ಇದಾದ ನಂತರ ಮನ್ನತ್ ನ ಸಿಬ್ಬಂದಿ ಬಂದು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳಿಬ್ಬರ ಹೆಸರು ಪಠಾಣ್ ಸಾಹಿಲ್ ಸಲೀಂ ಖಾನ್ ಮತ್ತು ರಾಮ್ ಸರಾಫ್ ಕುಶ್ವಾಹ ಎಂದು ತಿಳಿದುಬಂದಿದೆ. ಇಬ್ಬರೂ ಗುಜರಾತ್‌ನ ಭರೂಚ್‌ ನಿವಾಸಿಗಳು. ಇಬ್ಬರಲ್ಲಿಯೂ ಯಾವುದೇ ಅನುಮಾನಾಸ್ಪದ ವಿಚಾರ ಪತ್ತೆಯಾಗಿಲ್ಲ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದ್ದು, ಬಳಿಕ ಇಬ್ಬರ ಕುಟುಂಬಸ್ಥರು ಬಂದು ಜಾಮೀನು ನೀಡಿ ಬಿಡಿಸಿಕೊಂಡು ಹೋಗಿದ್ದಾರೆ.

ಇಬ್ಬರೂ ನ್ಯಾಯಾಲಯದಿಂದ 10,000 ರೂಪಾಯಿ ಜಾಮೀನು ಪಡೆದರು. ಇಬ್ಬರೂ ಮನ್ನತ್‌ನಲ್ಲಿ ಗೋಡೆ ಹಾರಿ ಒಳಗೆ ಹೋಗುತ್ತಿದ್ದಾಗ ಒಬ್ಬ ಆರೋಪಿಗೆ ಮಾತ್ರ ಮೂಗಿಗೆ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ನೀಡಿದ ನಂತರ ಸಿಬ್ಬಂದಿ ಆತನನ್ನು ಠಾಣೆಗೆ ಕರೆತಂದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com