ಬೆಂಗಳೂರು: ಇತ್ತೀಚೆಗೆ ಮುಕ್ತಾಯವಾಗಿದ್ದ ಬಿಗ್ ಬಾಸ್ ಸೀಜನ್ 6 ವಿಜೇತ ಶಶಿ ಕುಮಾರ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಅವರು ತಮ್ಮ ಕುಟುಂಬ ಸಮೇತರಾಗಿ ರಕ್ತದಾನ ಮಾಡಿದ್ದಲ್ಲದೆ ಅಂಗಾಂಗ ದಾನ ಮಾಡುವ ಕುರಿತು ಕಾಗದ ಪತ್ರಗಳಿಗೆ ಸಹಿ ಹಾಕಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿದ್ದಾಗಲೇ ತಾವು ಕುಟುಂಬ ಸಮೇತವಾಗಿ ರಕ್ತದಾನ ಮಾಡುವುದಾಗಿಯೂ, ಅಂಗಾಂಗಗಳ ದಾನ ಮಾಡುವುದಾಗಿಯೂ ಹೇಳಿಕೆ ನೀಡಿದ್ದರು. ಅದೇ ರೀತಿ ಶಶಿ ಕುಮಾರ್ ಕುಟುಂಬ, ಸ್ನೇಹಿತರೊಡನೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದಾರೆ. ಅಂಗಾಗ ದಾನ ಮಾಡುವ ಅನುಮತಿ ಪತ್ರಕ್ಕೆ ಅವರು ಸಹಿ ಹಾಕಿದ್ದಾರೆ.
ಕೃಷಿಕರಾಗಿರುವ ಶಶಿ ಕುಮಾರ್ ಈ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನು ಇವರ ಈ ಕೆಲಸಕ್ಕೆ ಅವರ ಕುಟುಂಬ, ಪರಿವಾರದವರ ಸಂಪೂರ್ಣ ಸಹಕಾರವೂ ಇದೆ.
ಬಿಗ್ ಬಾಸ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಪ್ರಗತಿಪರ ರೈತ ಶಶಿ ಕುಮಾರ್ ಯುವಕರನ್ನು ಕೃಷಿಯತ್ತ ಆಕರ್ಷಿಸುವುದಕ್ಕೆ ತಾವು ಸಾಕಷ್ಟು ಪ್ರಯತ್ನಿಸುತ್ತೇನೆ ಎಂದಿದ್ದರು. ಅಲ್ಲದೆ ತಮಗೆ ಬಹುಮಾನವಾಗಿ ದೊರೆತ ಹಣವನ್ನು ಯುವ ರೈತರಿಗೆ ಕೃಷಿ ತಂತ್ರಜ್ಞಾನ, ತರಬೇತಿಗಾಗಿ ಬಳಸಿಕೊಳ್ಳುತ್ತೇನೆ ಎಂದಿದ್ದರು. ಇದೀಗ ಶಶಿ ಕುಮಾರ್ ತಾವು ಕೃಷಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ.