ಬೆಂಗಳೂರು: ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೋಧನೆ ಮುಗಿದ ನಂತರ ಕಳೆದ ತಡರಾತ್ರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದಾರೆ.
ನಮ್ಮ ಮನೆಗೆ ಐಟಿ ಅಧಿಕಾರಿಗಳು ಬಂದು ನನ್ನ ಆದಾಯ, ಹೂಡಿಕೆಗಳು, ದಾಖಲೆಗಳ ತಪಾಸಣೆ ಮತ್ತು ಪರಿಶೀಲನೆ ನಡೆಸಿರುವುದು ನಿಜ. ಯಾವುದೇ ಉದ್ಯಮಿ ಅಥವಾ ಕಲಾವಿದನ ಮನೆಗೆ ಐಟಿ ಅಧಿಕಾರಿಗಳು ಬಂದರೆಂದರೆ ಅದು ಅಕೌಂಟ್ ಗೆ ಸಂಬಂಧಪಟ್ಟದ್ದಾಗಿರುತ್ತದೆ. ನಮ್ಮ ಮನೆಗೆ ಬಂದು ಅಕೌಂಟ್ ಗಳ ಮಾಹಿತಿ ಪಡೆದು ಹೋಗಿದ್ದಾರೆ ಎಂದರು.
ಐಟಿ ಅಧಿಕಾರಿಗಳು ಬಂದರೆಂದರೆ ಅಕ್ಕಪಕ್ಕದ ಮನೆಯವರಿಗೆ, ಸಾರ್ವಜನಿಕರಿಗೆ ಹಲವು ಅನುಮಾನಗಳು ಬರುತ್ತವೆ. ಆದರೆ ಇದು ಯಾವುದೂ ಅಲ್ಲ. ಅಧಿಕಾರಿಗಳಿಗೆ ಎಲ್ಲಿಂದಲೋ ಏನೋ ಮಾಹಿತಿ ಸಿಕ್ಕಿರುತ್ತದೆ. ಅದನ್ನು ಆಧರಿಸಿ ನಮ್ಮ ಮನೆಗೆ ಬಂದಿರಬಹುದು ಎಂದು ಹಲವು ಅನುಮಾನಗಳಿಗೆ ಪುನೀತ್ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಈ ಮಧ್ಯೆ ಇಂದು ಸಂಜೆ ಹುಬ್ಬಳ್ಳಿಯಲ್ಲಿ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮದ ಆಡಿಯೊ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು ಅದರಲ್ಲಿ ಪುನೀತ್ ಭಾಗವಹಿಸಲಿದ್ದಾರೆ.
Advertisement