ಕಟೌಟ್, ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಎಂದು ಕರೆ ನೀಡಿದ ನಟ ಸಿಂಬು ವಿರುದ್ಧ ಹಾಲು ವಿತರಕರು ದೂರು

ತಮ್ಮ ಚಿತ್ರ ಬಿಡುಗಡೆಯಾದ ದಿನ ಬ್ಯಾನರ್, ಕಟೌಟ್ ಮೇಲೆ ಹಾಲಿನ ಅಭಿಷೇಕ ...
ನಟ ಸಿಂಬು
ನಟ ಸಿಂಬು

ಚೆನ್ನೈ: ತಮ್ಮ ಚಿತ್ರ ಬಿಡುಗಡೆಯಾದ ದಿನ ಬ್ಯಾನರ್, ಕಟೌಟ್ ಮೇಲೆ ಹಾಲಿನ ಅಭಿಷೇಕ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದ ತಮಿಳು ನಟ ಸಿಂಬು ವಿರುದ್ಧ ತಮಿಳು ನಾಡು ಹಾಲು ಒಕ್ಕೂಟ ಪದಾಧಿಕಾರಿಗಳ ಸಂಘಟನೆ ಚೆನ್ನೈ ಪೊಲೀಸ್ ಆಯುಕ್ತ ಕಚೇರಿಯಲ್ಲಿ ದೂರು ನೀಡಿದೆ. ಅಲ್ಲದೆ ನಾಡಿದ್ದು ಫೆಬ್ರವರಿ 1ರಂದು ಸಿನಿಮಾ ಬಿಡುಗಡೆ ದಿನ ಹಾಲು ವಿತರಕರಿಗೆ ರಕ್ಷಣೆ ನೀಡಬೇಕೆಂದು ಕೋರಿದೆ. ಪ್ರಚೋದನಾಕಾರಿ ಭಾಷಣ ಮಾಡಿದ ನಟ ಸಿಂಬು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸಿದೆ.

ನನ್ನ 'ವಂತ ರಜವತನ್ ವರುವೇನು' ಸಿನಿಮಾದ ಬಿಡುಗಡೆಯನ್ನು ಸಂಭ್ರಮಿಸಬೇಡಿ. ಸಿನಿಮಾ ಟಿಕೆಟ್ ಪಡೆಯಲು ಬಹಳ ಹಣ ಖರ್ಚು ಮಾಡಬೇಡಿ. ಅದರ ಬದಲು ನಿಮ್ಮ ತಂದೆ ತಾಯಿಗೆ ಬಟ್ಟೆ ಕೊಳ್ಳಲು ಮೀಸಲಿಡಿ. ಚಿತ್ರ ಬಿಡುಗಡೆ ಎಂದು ಕಟೌಟ್ ಹಾಕುವುದು, ಬ್ಯಾನರ್ ನೇತಾಡಿಸಬೇಡಿ ಎಂದು ಅಭಿಮಾನಿಗಳಿಗೆ ಹೇಳಿ ವಿಡಿಯೊ ಮಾಡಿ ಕಳೆದ ಮಂಗಳವಾರ ಬಿಡುಗಡೆಗೊಳಿಸಿದ್ದು ಅದು ವೈರಲ್ ಆಗಿತ್ತು.

ನಂತರ ಮತ್ತೊಂದು ವಿಡಿಯೊದಲ್ಲಿ ಸಿಂಬು ಅವರು ಮಾತನಾಡುತ್ತಾ, ನನಗೆ ಒಬ್ಬರೋ, ಇಬ್ಬರೋ ಅಭಿಮಾನಿಗಳಿರುವುದರಿಂದ ಪ್ರಚಾರಕ್ಕಾಗಿ ವಿಡಿಯೊ ಬಿಡುಗಡೆ ಮಾಡಿದೆ ಎಂದು ಕೆಲವರು ಆರೋಪಿಸುತ್ತಾರೆ. ಅದಕ್ಕಾಗಿ ಈಗ ಹೇಳುತ್ತಿದ್ದೇನೆ, ನನ್ನ ಸಿನಿಮಾ ಬಿಡುಗಡೆ ದಿನ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಬ್ಯಾನರ್, ಕಟೌಟ್ ಹಾಕಿ ಅದರ ಮೇಲೆ ಹಾಲು ಸುರಿದು ಆಚರಣೆ ಮಾಡಿ, ಅಷ್ಟಕ್ಕೂ ನನಗೆ ಇರುವುದು ಒಬ್ಬರೋ, ಇಬ್ಬರೋ ಅಭಿಮಾನಿಗಳು. ಒಂದಿಬ್ಬರು ಸಂಭ್ರಮಾಚರಣೆ ಮಾಡಿದರೆ ಯಾರು ಪ್ರಶ್ನೆ ಮಾಡುತ್ತಾರೆ ಎಂದು ಹೇಳಿ ವಿಡಿಯೊ ಬಿಡುಗಡೆಮಾಡಿದ್ದಾರೆ.

ಈ ಕುರಿತು ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ತಮಿಳು ನಾಡು ಹಾಲು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಸ್ ಎ ಪೊನ್ನುಸಾಮಿ, ಚಿತ್ರ ಬಿಡುಗಡೆ ದಿನ ಹಾಲು ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕೆಂದು ನಾವು ಪೊಲೀಸ್ ಆಯುಕ್ತರನ್ನು ಕೇಳಿಕೊಂಡಿದ್ದೇವೆ. ಬೇರೆ ನಟರ ಅಭಿಮಾನಿಗಳ ವಿರುದ್ಧ ತಮ್ಮ ಅಭಿಮಾನಿಗಳು ಕೆರಳುವಂತೆ ನಟ ಸಿಂಬು ಅವರ ಮಾತುಗಳಿವೆ. ಹೀಗಾಗಿ ಸಿಂಬು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ ಎಂದರು.

2015ರಿಂದ ನಾವು ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಹಾಲಿನ ಅಭಿಷೇಕ ಮಾಡುವುದನ್ನು ವಿರೋಧಿಸುತ್ತೇವೆ. ತಮಿಳುನಾಡಿನಲ್ಲಿ ಶೇಕಡಾ 25ರಷ್ಟು ಜನಕ್ಕೆ ಹಾಲು ಖರೀದಿಸಲು ಕೂಡ ಸಾಧ್ಯವಾಗುತ್ತಿಲ್ಲ. ಆದರೆ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಅನೇಕ ಹಾಲುಗಳು ನಷ್ಟವಾಗುತ್ತವೆ. ಇದು ಸರಿಯಲ್ಲ, ಈ ಕ್ರಮ ನಿಲ್ಲಬೇಕು ಎಂದು ಪೊನ್ನುಸಾಮಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com