ಯಾವುದೇ ಕಾರಣಕ್ಕೂ ರಾಧಿಕಾ ಪ್ರತಿಭೆ ವೇಸ್ಟ್ ಆಗಲು ಬಿಡುವುದಿಲ್ಲ: ಯಶ್

ಮೂರು ವರ್ಷಗಳ ನಂತರ ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮತ್ತೆ ಬೆಳ್ಳಿ ತೆರೆ ಮೇಲೆ ...
ಯಶ್, ರಾಧಿಕಾ ಪಂಡಿತ್
ಯಶ್, ರಾಧಿಕಾ ಪಂಡಿತ್
ಬೆಂಗಳೂರು: ಮೂರು ವರ್ಷಗಳ ನಂತರ ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮತ್ತೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಲಕ್ಷ್ಮಿಯಾಗಿ.
ರಾಧಿಕಾ ಪಂಡಿತ್ ಮತ್ತು ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯದ ಆದಿಲಕ್ಷ್ಮಿ ಪುರಾಣ ಚಿತ್ರ ಇದೇ 19ರಂದು ಬಿಡುಗಡೆಯಾಗುತ್ತಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಪ್ರಿಯಾ ವಿ ನಿರ್ದೇಶನದ ಚಿತ್ರದ ಟ್ರೈಲರ್ ನ್ನು ರಾಕಿಂಗ್ ಸ್ಟಾರ್ ಯಶ್ ನಿನ್ನೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶ್, ಮದುವೆಯಾದ ನಂತರ ರಾಧಿಕಾ ಅಭಿನಯದ ಬಿಡುಗಡೆಯಾಗುತ್ತಿರುವ ಚಿತ್ರ ಆದಿಲಕ್ಷ್ಮಿ ಪುರಾಣವಾಗಿದ್ದು ನಮಗಿಬ್ಬರಿಗೂ ಇದು ವಿಶೇಷವಾದ ಚಿತ್ರವಾಗಿದೆ. ಇಲ್ಲಿ ರಾಧಿಕಾ ಪಾತ್ರ ತುಂಬಾ ಸೊಗಸಾಗಿದೆ ಎಂದರು.
ಚಿತ್ರದ ಟ್ರೈಲರ್ ಲಾಂಚ್ ಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕರೆದರು. ಅಷ್ಟೇ ಅಲ್ಲದೆ ರಾಧಿಕಾ ಗಂಡನಾದ ಮೇಲೆ ಈ ಕಾರ್ಯಕ್ರಮಕ್ಕೆ ಬರದಿದ್ದರೆ ಆಗುತ್ತದೆಯೇ, ನಾನು ಇವತ್ತು ಬರಲಿಲ್ಲ ಅಂದಿದ್ರೆ ಮನೆಯಲ್ಲಿ ಬೀಳ್ತಿತ್ತು ಎಂದು ತಮಾಷೆ ಮಾಡಿದರು.
ಇನ್ನು ಮದುವೆಯಾದ ಬಳಿಕ ಮಕ್ಕಳಾದ ಮೇಲೆ ರಾಧಿಕಾ ಅಭಿನಯಿಸುತ್ತಾರ, ಇಲ್ಲ ಚಿತ್ರರಂಗದಿಂದ ದೂರವುಳಿಯುತ್ತಾರ ಎಂಬ ಸಂದೇಹಗಳು ಅವರ ಅಭಿಮಾನಿಗಳಲ್ಲಿದೆ.  ಈ ಸಂದರ್ಭದಲ್ಲಿ ಒಂದು ಮಾತು ಹೇಳಲು ಇಷ್ಟಪಡುತ್ತೇನೆ, ರಾಧಿಕಾ ಪ್ರತಿಭೆ ವೇಸ್ಟ್ ಆಗಲು ಬಿಡುವವನಲ್ಲ ನಾನು, ಅವರು ಯಾವಾಗ ಏನೇ ಮಾಡಿದರೂ ಅಭಿಮಾನಿಯಾಗಿ ನಿಮ್ಮ ಥರ ನೋಡಲು ನಾನು ಕೂಡ ಕಾಯುತ್ತಿರುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com