ಬೆಂಗಳೂರು: ಪಡುಕೋಟೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಯಾರ್ ಮಗ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ ನಿರ್ಮಾಪಕ ಬಸವರಾಜ್ ಪಡುಕೋಟೆ ಪುತ್ರ ರಘು ಪಡುಕೋಟೆ ಸ್ವತಃ ಕಥೆ ಬರೆದು, ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಸುರೇಶ್ ರಾಜ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ತಾಯಿ ಮಗನ ಬಾಂಧವ್ಯ ಹಾಗೂ ಭೂಗತ ಜಗತ್ತಿನ ಕಥಾಹಂದರವಿರುವ ಚಿತ್ರದಲ್ಲಿ ಶಿವಾಜಿನಗರದ ನಿಜವಾದ ರೌಡಿಗಳೇ ನಟಿಸಲಿದ್ದಾರಂತೆ.
'ಏ ಸೋನಾ' ಆಲ್ಬಂ ಮೂಲಕ ಈಗಾಗಲೇ ಪರಿಚಿತರಾಗಿರುವ ರಘು ಪಡುಕೋಟೆ ಅವರ ಜನ್ಮದಿನವಾದ ಜುಲೈ 24 ರಂದೇ ಟೀಸರ್ ಬಿಡುಗಡೆಯ ಜೊತೆಗೆ ಚಿತ್ರದ ಉಳಿದ ತಾರಾಗಣಕ್ಕಾಗಿ ಆಡಿಷನ್ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು ಕರವೇ ಅಧ್ಯಕ್ಷ ಟಿ ನಾರಾಯಣಗೌಡ, ವೇದಾಂತಾಚಾರ್ಯ ಮಲ್ಲಿಕಾರ್ಜುನ ಸ್ವಾಮೀಜಿ ಮೊದಲಾದವರು ಚಿತ್ರತಂಡಕ್ಕೆ ಶುಭ ಕೋರಿದರು “ತಾಯಿಯನ್ನು ಕಳೆದುಕೊಂಡ ಮಗನ ನೋವು ಮತ್ತು ಭೂಗತ ಲೋಕದ ವ್ಯವಹಾರ ಈ ಚಿತ್ರದಲ್ಲಿ ಅನಾವರಣಗೊಳ್ಳಲಿದೆ’ ಎಂದು ರಘು ಪಡುಕೋಟೆ ತಿಳಿಸಿದರು
ನಾಯಕಿಯಾಗಿ ವಿದ್ಯಾ ಪ್ರಭು, ತಾಯಿಯ ಪಾತ್ರದಲ್ಲಿ ಅಶ್ವಿನಿ ಗೌಡ, ಖಳನಟರಾಗಿ ಗಣೇಶ್ ರಾವ್, ಹರೀಶ್ ಗೌಡ, ಮೈಕೆಲ್ ಮಧು, ಗುರುರಾಜ್ ಹೊಸಕೋಟೆ, ಸುನಿಲ್, ಶಾಲಿನಿ ಗೌಡ ಮೊದಲಾದವರಿದ್ದಾರೆ ಇನ್ನುಳಿದ ಪಾತ್ರಧಾರಿಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡುವುದಾಗಿ ನಿರ್ದೇಶಕ ಸುರೇಶ್ ರಾಜ್ ಹೇಳಿದರು.