ಇನ್ಮೇಲೆ ದುಡ್ಡು ಮಾಡಿ ತೋರಿಸ್ತೀನಿ: ಕ್ರೇಜಿಸ್ಟಾರ್ ರವಿಚಂದ್ರನ್

ಏನು ಮಾಡಬೇಕು ಅಂತ ತಿಳಿಯದೆ ಏನೇನೋ ಮಾಡಿದೆ. ಹಣದ ಚಿಂತೆ ಬಿಟ್ಟು, ಶ್ರದ್ಧೆಯಿಂದ ಚಿತ್ರಗಳನ್ನು ನಿರ್ಮಿಸಿದೆ. ಆದರೆ ಮಗಳ ಮದುವೆ...
ರವಿಚಂದ್ರನ್
ರವಿಚಂದ್ರನ್
ಬೆಂಗಳೂರು: ಏನು ಮಾಡಬೇಕು ಅಂತ ತಿಳಿಯದೆ ಏನೇನೋ ಮಾಡಿದೆ. ಹಣದ ಚಿಂತೆ ಬಿಟ್ಟು, ಶ್ರದ್ಧೆಯಿಂದ ಚಿತ್ರಗಳನ್ನು ನಿರ್ಮಿಸಿದೆ. ಆದರೆ ಮಗಳ ಮದುವೆ ಸಮಯದಲ್ಲಿ ದುಡ್ಡಿನ ಮಹತ್ವ ಗೊತ್ತಾಯಿತು. ಹೀಗಾಗಿ ಇನ್ನು ಮುಂದೆ ದುಡ್ಡು ಮಾಡಿ ತೋರಿಸ್ತೀನಿ ಅಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.
ಬರಗೂರು ರಾಮಚಂದ್ರಪ್ಪ ನಿರ್ದೇಶನದ “ಬಯಲಾಟದ ಭೀಮಣ್ಣ’ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಮಾತನಾಡಿದ ಕ್ರೇಜಿಸ್ಟಾರ್, “ಅತ್ಯಂತ ಇಷ್ಟಪಟ್ಟು, ಸಾಲ ಮಾಡಿ ಪ್ರೀತಿಯಿಂದ ‘ಏಕಾಂಗಿ’ ಚಿತ್ರ ನಿರ್ಮಿಸಿದೆ. ಆದರೆ ಯಶಸ್ಸು ಸಿಗಲಿಲ್ಲ. ಆದರೂ ಎದೆಗುಂದದೆ ಎಲ್ಲವನ್ನೂ ಎದುರಿಸಿದ್ದಾಯಿತು. ಮಗಳ ಮದುವೆ ಸಂದರ್ಭದಲ್ಲಿ ಒಂದೊಂದು ಪೈಸೆಯ ಮಹತ್ವದ ಅರಿವಾಯಿತು ಹೀಗಾಗಿ ಇನ್ನು ಮೇಲೆ ದುಡ್ಡು ಮಾಡುವುದರ ಕಡೆಗೆ ಗಮನ ನೀಡುತ್ತೇನೆ” ಎಂದು ಹೇಳಿದರು.
“ಕನಸು ಯಾರೊಬ್ಬರ ಸ್ವತ್ತಲ್ಲ ಹಾಗೆ ನೋಡಿದರೆ ಕನಸು ಕಾಣುವವರೇ ನಿಜವಾದ ಶ್ರೀಮಂತರು. ನಾವು ಕಂಡ ಕನಸು ಪರದೆಯ ಮೇಲೆ ಮೂಡಿದಾಗ ಸೋತರೂ ಗೆದ್ದಂತೆಯೇ. ಹಿಂದೆ ‘ಜನಪದ’ ಹೆಸರಿನ ಸಿನಿಮಾ ಮಾಡುವುದಾಗಿ ಬರಗೂರರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಆಗ ನನ್ನ ಕನಸು ಬೇರೆಯದೇ ಆಗಿತ್ತು” ಎಂದರು.
ರವಿಚಂದ್ರನ್ ಚಿತ್ರಗಳ ಗಂಭೀರ ಅಧ್ಯಯನ ನಡೆಯಬೇಕು: ಬರಗೂರು
ಕನ್ನಡ ಚಿತ್ರರಂಗದಲ್ಲಿ ಸಾಲ ಮಾಡಿ ಚಿತ್ರ ನಿರ್ಮಿಸಿ ಸಂಭ್ರಮಿಸುವ ವ್ಯಕ್ತಿ ರವಿಚಂದ್ರನ್ ಎಂದ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ಹಾಡುಗಳಲ್ಲಿ ಭಾವತೀವ್ರತೆಯನ್ನು ಸಹಜವಾಗಿ ಮೂಡಿಸುವ ನಿರ್ದೇಶಕರಲ್ಲಿ ಥಟ್ಟನೆ ನೆನಪಾಗುವುದು ರವಿಚಂದ್ರನ್ ಹಾಗೂ ರಾಜ್ ಕಪೂರ್. ಇವರಿಬ್ಬರ ಚಿತ್ರದ ಹಾಡುಗಳಲ್ಲಿ ಸೌಂದರ್ಯಪ್ರಜ್ಞೆ, ಭಾವತೀವ್ರತೆ ಎದ್ದುಕಾಣುತ್ತದೆ ಎಂದು ಶ್ಲಾಘಿಸಿದರು
ಚಿತ್ರರಂಗದಲ್ಲಿ ಸಾಲ ಮಾಡಿ ಸಂಭ್ರಮಿಸುವ ವ್ಯಕ್ತಿ ರವಿಚಂದ್ರನ್ ಅವರ ಸರಳ ಮಾತುಗಳ ಹಿಂದೆ ತತ್ವಜ್ಞಾನ ಅಡಗಿರುತ್ತದೆ. ವಿಶಿಷ್ಟ ವ್ಯಕ್ತಿತ್ವದ ಶೋಮ್ಯಾನ್ ರವಿಚಂದ್ರನ್ ನಿರ್ಮಿಸಿರುವ ಚಿತ್ರಗಳ ಗಂಭೀರ ಅಧ್ಯಯನ ನಡೆಯಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com