ಚೇತನ್ ಕುಮಾರ್ ನಿರ್ದೇಶನದ ಶ್ರೀಮುರಳಿಯವರ ಮುಂದಿನ ಚಿತ್ರ ಭರಾಟೆಯ ಸಂಭಾಷಣೆ ಭಾಗ ಮುಗಿದಿದೆ. ಇನ್ನು ಎರಡು ಹಾಡಿನ ಶೂಟಿಂಗ್ ಬಾಕಿ ಇದ್ದು ಅದನ್ನು ಯುರೋಪ್ ನಲ್ಲಿ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ. ಜುಲೈಯಲ್ಲಿ ಚಿತ್ರತಂಡ ಯುರೋಪ್ ಗೆ ಹೋಗಲಿದೆ.
ಈ ಮಧ್ಯೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮತ್ತು ಡಬ್ಬಿಂಗ್ ಕೆಲಸ ಒಟ್ಟೊಟ್ಟಿಗೆ ನಡೆಯಲಿದೆ. ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದ್ದು ಸುಮಾರು 75 ಪ್ರಮುಖ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಇವರೆಲ್ಲರನ್ನು ದಿನಾಂಕಗಳಿಗೆ ಹೊಂದಿಸಿಕೊಂಡು ಡಬ್ಬಿಂಗ್ ಮಾಡಿಸುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ನಿರ್ದೇಶಕ ಚೇತನ್ ಅವರನ್ನು ಹೊಗಳಲೇ ಬೇಕು. ಒಂದು ವೇದಿಕೆಯಲ್ಲಿ ಹಲವು ಕಲಾವಿದರನ್ನು ಒಟ್ಟಿಗೆ ನಿಭಾಯಿಸುವುದು ನಿಜಕ್ಕೂ ಸವಾಲು ಎನ್ನುತ್ತಾರೆ ಚೇತನ್.
ಚಿತ್ರ ಚೆನ್ನಾಗಿ ಮೂಡಿಬರಬೇಕೆಂದು ಶ್ರೀಮುರಳಿಯವರು ಸಣ್ಣ ಸಣ್ಣ ವಿಷಯಗಳ ಬಗ್ಗೆ ಕೂಡ ಗಮನ ಹರಿಸುತ್ತಾರಂತೆ. ಚಿತ್ರಕ್ಕೆ ಸುಪ್ರೀತ್ ಅವರ ನಿರ್ಮಾಣ ಮತ್ತು ಅರ್ಜುನ್ ಜನ್ಯ ಸಂಗೀತವಿದೆ.
ಶ್ರೀಲೀಲಾ ನಾಯಕಿಯಾದರೆ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಶರ್ಮ, ಅವಿನಾಶ್, ಶರತ್ ಲೋಹಿತಾಶ್ವ, ರಾಜು ವಾಡೆ, ಮನಮೋಹನ್, ಉಗ್ರಂ ಮಂಜು ಮತ್ತು ದೀಪಕ್ ರಂತಹ ಪ್ರಮುಖ ಕಲಾವಿದರಿದ್ದಾರೆ.
ಭರಾಟೆ ಗಣೇಶ ಚತುರ್ಥಿ ಸಂದರ್ಭದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.