ಯಾರೂ ನನ್ನನ್ನು ಟಚ್ ಮಾಡೋಕೆ ಆಗಲ್ಲ: 'ಕೊಲೆಗೆ ಸುಪಾರಿ' ಸುದ್ದಿಗೆ ಯಶ್ ಪ್ರತಿಕ್ರಿಯೆ

ಅಷ್ಟು ಸುಲಭವಾಗಿ ಯಾರೂ ನನ್ನನ್ನು ಟಚ್ ಮಾಡಲು ಆಗುವುದಿಲ್ಲ. ಯಾರೋ ಬಂದು ನನ್ನನ್ನು ಕುಯ್ದು ಹಾಕೋಕೆ ನಾನೇನು ಕೋಳಿನಾ...
ಯಶ್
ಯಶ್
ಬೆಂಗಳೂರು: ಅಷ್ಟು ಸುಲಭವಾಗಿ ಯಾರೂ ನನ್ನನ್ನು ಟಚ್ ಮಾಡಲು ಆಗುವುದಿಲ್ಲ. ಯಾರೋ ಬಂದು ನನ್ನನ್ನು ಕುಯ್ದು ಹಾಕೋಕೆ ನಾನೇನು ಕೋಳಿನಾ ಅಥವಾ ಕುರಿನಾ ಎಂದು ನಟ ಯಶ್ ಪ್ರಶ್ನಿಸಿದ್ದಾರೆ.
ನಟ ಯಶ್ ಕೊಲೆಗೆ ಸುಪಾರಿ ನೀಡಲಾಗಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಇಂದು ಖಾಸಗಿ ಹೋಟೆಲ್ ನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಯಶ್, ನನ್ನ ಕೊಲೆಗೆ ಯಾರೂ ಸಂಚು ರೂಪಿಸಿಲ್ಲ. ಇದು ಕೇವಲ ವದಂತಿ. ಈ ಕುರಿತು ಮಾಧ್ಯಮಗಳಿಗೆ ಯಾರೂ ಮಾಹಿತಿ ನೀಡುತ್ತಿದ್ದಾರೋ ಅವರ ಬಗ್ಗೆ ನಮಗೆ ತಿಳಿಸಿ. ಅವರಿಂದಲೆ ಸತ್ಯ ಏನೆಂದು ತಿಳಿದುಕೊಳ್ಳೋಣ ಎಂದರು.
ಸಮಾಜ ಘಾತುಕ ವ್ಯಕ್ತಿಗಳ ಬಂಧನವಾದಾಗಲೆಲ್ಲ ನನ್ನ ಹೆಸರು ತರುವುದು ತಪ್ಪು. ನನ್ನ ಕೊಲೆಗೆ ಸುಪಾರಿ ಎಂಬ ಸುದ್ದಿಗಳಿಂದ ನನಗೆ ಬೇಸರವಾಗಿದೆ. ನನ್ನ ಮನೆಯವರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ  ಕಿರಿಕಿರಿಯಾಗುತ್ತಿದೆ. ದಯವಿಟ್ಟು ಇಂತಹ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸಿ. ನನ್ನ ಹತ್ಯೆಗೆ ಸಂಚು ಸುದ್ದಿ ಕುರಿತಂತೆ ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೆ ಎಂದು ದಯವಿಟ್ಟು ನಮಗೆ ತಿಳಿಸಿ. ಸತ್ಯಾಸತ್ಯತೆಯನ್ನು ಪೊಲೀಸರು ಪತ್ತೆ ಮಾಡುತ್ತಾರೆ ಎಂದರು.
ಈ ಸಂಬಂಧ ನಾನು ಪೊಲೀಸರ ಜೊತೆ ಹಾಗೂ ಸ್ವತಃ ಗೃಹ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೂ ಮಾತನಾಡಿದ್ದೇನೆ. ನನ್ನ ಕೊಲೆಗೆ ಸುಪಾರಿ ನೀಡಿಲಾಗಿದೆ ಎಂಬುದು ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರು.
ನಮ್ಮ ಸಿನಿಮಾ ರಂಗದಲ್ಲಿ ಆರೋಗ್ಯಕರ ಸ್ಪರ್ಧೆ ಇದೆ. ಯಾರೂ ಅಷ್ಟು ಕೀಳು ಮಟ್ಟದ ಪ್ರವೃತ್ತಿ ಇರುವವರು ನಮ್ಮಲ್ಲಿ ಇಲ್ಲ ಎಂದು ಯಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com