ಬೆಂಗಳೂರು: ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು ಬಹಳ ವರ್ಷಗಳ ನಂತರ ಲಾಯರ್ ಆಗಿ ಕಾಣಿಸಿಕೊಂಡಿರುವ 'ದಶರಥ' ಚಿತ್ರದ ನಿರ್ಮಾಪಕರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ.
ದಶರಥ ಚಿತ್ರದ ಎರಡನೇಯ ಹಾಡಿನಲ್ಲಿ ಕರಿ ಕೋಟ್ ಹಾಕೋರೆಲ್ಲಾ ಕೇಸ್ ಗೆಲ್ಲೋದಿಲ್ಲ.... ಗೆದ್ದು ಬಿಗೋರೆಲ್ಲಾ ಹರಿಶ್ಚಂದ್ರರಲ್ಲ ಎಂಬ ಸಾಲಿಗೆ ಇಬ್ಬರು ವಕೀಲರಾದ ಗಾದಿ ಲಿಂಗಪ್ಪ ಮತ್ತು ಪರುಶುರಾಮ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಕರಿಕೋಟು ಹಾಕೋರೆಲ್ಲ ಕೇಸು ಗೆಲ್ಲೋದಿಲ್ಲ’ ಎಂಬ ಹಾಡನ್ನು ಚಿತ್ರದಿಂದ ತೆಗೆದುಹಾಕಲು ನಿರ್ದೇಶನ ನೀಡಬೇಕೆಂದು ವಕೀಲರಾದ ಗಾದಿಲಿಂಗಪ್ಪ ಅರ್ಜಿ ಸಲ್ಲಿಸಿದ್ದಾರೆ.
ದಶರಥ ಚಿತ್ರ ಏಪ್ರಿಲ್ 5ರಂದು ತೆರೆ ಕಾಣುತ್ತಿದ್ದು, ಚಿತ್ರ ಬಿಡುಗಡೆಗೂ ಮುನ್ನ ವಿವಾದ ಇತ್ಯರ್ಥಪಡಿಸಲು ನಾವು ಮಾರ್ಚ್ 22ರಂದು ಪ್ರಯತ್ನಿಸುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ಎಂಎಸ್ ರಮೇಶ್ ಅವರು ಹೇಳಿದ್ದಾರೆ.
ಕರಿಕೋಟು ಹಾಕೋರೆಲ್ಲ ಕೇಸು ಗೆಲ್ಲೋದಿಲ್ಲ.... ಸಾಲು ತೆಗೆಯಲು ನಿರ್ದೇಶಕರು ಸಿದ್ಧರಿಲ್ಲ. ಆದರೆ ಈ ಹಾಡಿನಲ್ಲಿ ನ್ಯಾಯಾಲಯಗಳ ಘನತೆಗೆ ಧಕ್ಕೆಯಾಗುವ ಪದ ಬಳಸಲಾಗಿದೆ ಎಂದು ವಕೀಲರು ವಾದಿಸುತ್ತಿದ್ದಾರೆ.
ವಿ. ಮನೋಹರ್ ಅವರು ಬರೆದಿರುವ ಈ ಹಾಡನ್ನು ಗುರುಕಿರಣ್, ಪೀಚಳ್ಳಿ ಶ್ರೀನಿವಾಸ್ ಮತ್ತು ದೊಡ್ಡಪ್ಪ ಹಾಡಿದ್ದಾರೆ.