ಇಷ್ಟು ವರ್ಷ ನಮ್ಮ ಮನೆಯ ಮಹಾಲಕ್ಷ್ಮಿಯಂತಿದ್ದ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿದ್ದಾಳೆ ಎನಿಸಿದಾಗ, ನೋವು ಹಾಗೂ ಸಂತೋಷ ಒಟ್ಟೊಟ್ಟಿಗೆ ಧುತ್ತನೆ ಉದ್ಭವಿಸುತ್ತದೆ. ಈ ಆಲೋಚನೆಯಲ್ಲಿಯೇ ತಂದೆ ಮತ್ತು ಮಗಳ ಬಾಂಧವ್ಯಕ್ಕೆ ಹಾಡೊಂದನ್ನು ಬರೆದು ರಾಗ ಸಂಯೋಜಿಸಿ ಮಗಳಿಗೆ ನೀಡುತ್ತಿದ್ದಾರೆ. “ಹಾಡನ್ನು ಕೇಳಿದ ಮಗಳು ನನ್ನೆದುರು ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಆದರೆ ನಾನಿಲ್ಲದಾಗ ಗಳಗಳನೆ ಕಣ್ಣೀರು ಸುರಿಸಿದಳಂತೆ. ಆದರೆ ನನ್ನ ಪತ್ನಿ ಮಾತ್ರ ಹಾಡು ಕೇಳಿ ಭಾವೋದ್ವೇಗಕ್ಕೆ ಒಳಗಾದರು ಎಂದು ರವಿಚಂದ್ರನ್ ತಿಳಿಸಿದ್ದಾರೆ.