ಬೆಂಗಳೂರು: ಇದು ನಿಜಕ್ಕೂ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸುದ್ದಿಯಾಗಿದ್ದು, 'ಆಯುಷ್ಮಾನ್ಭವ' ಚಿತ್ರ ಬಿಡುಗಡೆ ಮುಂದೂಡಲಾಗಿದೆ ಎಂದು ಚಿತ್ರತಂಡ ಮಂಗಳವಾರ ತಿಳಿಸಿದೆ.
'ಆಯುಷ್ಮಾನ್ಭವ' ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಈ ಮೊದಲು ಹೇಳಲಾಗಿತ್ತು.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ ಎಸ್ ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಅವರು ಈ ಚಿತ್ರ ನಿರ್ಮಿಸಿದ್ದಾರೆ
ದ್ವಾರಕೀಶ್ ಚಿತ್ರ ಸಂಸ್ಥೆಗೆ ೫೦ ವರ್ಷ ತುಂಬಿದ್ದು, ಆ ಸಂಸ್ಥೆಯಿಂದ ನಿರ್ಮಾಣವಾಗಿರುವ ೫೨ನೇ ಚಿತ್ರ 'ಆಯುಷ್ಮಾನ್ ಭವ'.
ಪಿ.ವಾಸು ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರು, ಗೌರಿಬಿದನೂರು, ಅಲೇಪಿ, ಚಾಲ್ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಇದು ಗುರುಕಿರಣ್ ಸಂಗೀತ ನಿರ್ದೇಶನದ ೧೦೦ನೇ ಚಿತ್ರ ಎಂಬುದು ವಿಶೇಷ.
ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗೌತಮ್ರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಎ. ಹರ್ಷ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶಿವರಾಜಕುಮಾರ್, ಅನಂತನಾಗ್, ರಚಿತಾರಾಮ್, ನಿಧಿಸುಬ್ಬಯ್ಯ, ಸುಹಾಸಿನಿ, ಶಿವಾಜಿಪ್ರಭು, ಸಾಧುಕೋಕಿಲ, ರಂಗಾಯಣ ರಘು, ಯಶ್ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Advertisement