ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ; ರಕ್ತದೊತ್ತಡ ಇನ್ನೂ ಕಡಿಮೆಯಾಗಿಲ್ಲ: ಅಪೊಲೋ ಆಸ್ಪತ್ರೆ
ಚೆನ್ನೈ: ಅನಾರೋಗ್ಯದ ಕಾರಣ ಶುಕ್ರವಾರ ಹೈದರಾಬಾದ್ನ ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ಸೂಪರ್ಸ್ಟಾರ್ ರಜನಿಕಾಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯ ಸುಧಾರಿಸುತ್ತಿದೆ, ಆದರೆ ರಕ್ತದೊತ್ತಡ ಅದೇ ಮಟ್ಟದಲ್ಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಸಂಬಂಧ ಅಪೊಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ರಕ್ತದೊತ್ತಡ ನಿಯಂತ್ರಿಸಲು ಚಿಕಿತ್ಸೆ ನೀಡಲಾಗುತ್ತಿದ್ದು, ಬಿಪಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿಸಿದೆ.
ಖ್ಯಾತ ನಟ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರ ತಂಡ ಸೂಕ್ಷ್ಮವಾಗಿ ರಜನಿ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸೂಕ್ತ ಔಷದೋಪಚಾರ ನೀಡಲಾಗುತ್ತಿದೆ. ರಜನೀಕಾಂತ್ ರಾತ್ರಿಯಿಡೀ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಇದ್ದರು ಎಂದು ಆಸ್ಪತ್ರೆ ಆಡಳಿತ ಮಾಹಿತಿ ನೀಡಿದೆ.
ಮತ್ತೊಂದು ಕಡೆ ನಿನ್ನೆಗಿಂತ ಇಂದು ಇನ್ನೂ ರಕ್ತದೊತ್ತಡ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ರಜನೀಕಾಂತ್ ಅವರಿಗೆ ರಕ್ತದೊತ್ತಡ ಸ್ಥಿರವಾಗುವವರೆಗೆ ಆಸ್ಪತ್ರೆಯಲ್ಲಿಯೇ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
ರಕ್ತದೊತ್ತಡ, ದಣಿವಿನ ಹೊರತಾಗಿ ಅವರಿಗೆ ಬೇರೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.
ರಜನಿಕಾಂತ್ ರಕ್ತದೊತ್ತಡದ ಹಿನ್ನೆಲೆಯಲ್ಲಿ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ ಮತ್ತು ಸಂದರ್ಶಕರನ್ನು ಅವರನ್ನು ಭೇಟಿ ಮಾಡಲು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ.