ಅದಿತ್ಯ ಶಶಿಕುಮಾರ್ ಎಂದೇ ಜನಪ್ರಿಯರಾಗಿರುವ ಅಕ್ಷಿತ್ ಎಸ್ ಕೆ ಅವರು ತಮ್ಮ ತಂದೆ(ನಟ ಶಶಿಕುಮಾರ್)ಯ ನಟನಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ದ್ವಿಭಾಷಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಗೆ ಏಕಕಾಲಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಆದಿತ್ಯ ಅಭಿನಯದ ಮೊದಲ ಚಿತ್ರ ಕನ್ನಡದಲ್ಲಿ ಸೀತಾಯಣ ಹಾಗೂ ತೆಲುಗಿನಲ್ಲಿ ಸೀತಾಯಣಂಗೆ ಪ್ರಭಾಕರ್ ಆರಿಪಕ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಅನಹಿತ ಭೂಷಣ್ ಅವರು ಅಕ್ಷಿತ್ ಅವರಿಗೆ ನಾಯಕಿ ಅಭಿನಯಿಸುತ್ತಿದ್ದಾರೆ.
ಅಕ್ಷಿತ್ ಅವರು ತೆಲುಗು ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಳಿಸಿದ್ದು, ಡಬ್ಬಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ.
ಆಡಿಷನ್ ಮೂಲಕ ನಾನು ಈ ಚಿತ್ರಕ್ಕೆ ಆಯ್ಕೆಯಾಗಿದ್ದೇನೆ. ಸ್ವಜನ ಪಕ್ಷಪಾತ ಅಥವಾ ಸ್ಟಾರ್ ಕಿಡ್ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ನನ್ನ ತಂದೆ ನಟ ಎಂಬ ಕಾರಣಕ್ಕೆ ಹೆಚ್ಚು ಗೌರವ ನೀಡಲಾಗುತ್ತಿದೆ ಎಂದು ಅರ್ಥವಲ್ಲ. ನಮ್ಮ ಸ್ಕಿಲ್ ಮತ್ತು ಹೇಗೆ ಅಭಿನಯಿಸುತ್ತೇವೆ ಎಂಬುದು ಮುಖ್ಯ. ಇದೇ ನನ್ನ ಮೊದಲ ಚಿತ್ರವಾಗಲಿದೆ. ಈ ಹಿಂದೆ ಒಂದು ಚಿತ್ರ ಆರಂಭಿಸಿದ್ದೇವೆ. ಆದರೆ ಅದು ಬೇರೆಯೇ ತಿರುವು ಪಡೆದುಕೊಂಡಿತು ಎಂದು ಅಕ್ಷಿತ್ ಅವರು ಹೇಳಿದ್ದಾರೆ.
‘ಸೀತಾಯಣಂ’ ಸಿನಿಮಾಕ್ಕೆ ತೆಲುಗಿನವರೇ ನಿರ್ವಪಕರು. ಅಲ್ಲಿನ ಕಲಾವಿದರೇ ಚಿತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ತಾಂತ್ರಿಕ ವಿಭಾಗದಲ್ಲೂ ತೆಲುಗಿನವರಿದ್ದಾರೆ. ಹಾಗಾಗಿ ಮೂಲ ಟಾಲಿವುಡ್ ಸಿನಿಮಾ ಆಗಿರುವ ‘ಸೀತಾಯಣಂ’ ಕನ್ನಡದಲ್ಲೂ ಅದೇ ಹೆಸರಿನಲ್ಲಿ ಡಬ್ ಆಗಿ ತೆರೆಕಾಣಲಿದ್ದು, ಡಬ್ಬಿಂಗ್ ಕೆಲಸಗಳು ಚಾಲ್ತಿಯಲ್ಲಿವೆ.
ಪಕ್ಕಾ ರೊಮ್ಯಾಂಟಿಕ್ ಲವ್ಸ್ಟೋರಿ ಕಥಾಹಂದರ ಹೊಂದಿದ್ದು, ನಿರ್ದೇಶಕ ಪ್ರಭಾಕರ್ ಆರಿಪಕ್ ಹೊಸ ರೀತಿಯ ಪ್ರೇಮಕಥೆಯನ್ನು ‘ಸೀತಾಯಣಂ’ನಲ್ಲಿ ಹೇಳಿದ್ದಾರಂತೆ. ಸಿನಿಮಾ ಶೀರ್ಷಿಕೆ ನೋಡುತ್ತಿದ್ದರೆ ರಾಮಾಯಣಕ್ಕೂ ಸೀತಾಯಣಂಗೂ ಸಂಬಂಧ ಇದೆಯಾ ಎಂದು ಅನಿಸದೆ ಇರದು. ಆದರೆ, ಇದು ಪ್ರಸ್ತುತ ಕಾಲಘಟ್ಟಕ್ಕೆ ಸಂಬಂಧಿಸಿದ ಕಥೆಯಂತೆ. ರೋಹನ್ ಭಾರದ್ವಾಜ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಲಲಿತಾ ರಾಜಲಕ್ಷ್ಮೀ, ಪದ್ಮನಾಭ್ ಭಾರದ್ವಾಜ್ ಬಂಡವಾಳ ಹೂಡುತ್ತಿದ್ದಾರೆ.
Advertisement