ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ನಿಶ್ಛಿತಾರ್ಥ ಇಂದು ಅದ್ಧೂರಿಯಾಗಿ ನೆರವೇರಿದೆ.
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ನಿಖಿಲ್ ಹಾಗೂ ರೇವತಿ ಅವರ ನಿಶ್ಚಿತಾರ್ಥ ಒಕ್ಕಲಿಗ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದಿದೆ. ಭಾವಿ ಪತ್ನಿ ರೇವತಿ ಅವರ ಕೈ ಬೆರಳಗೆ ವಜ್ರದುಂಗರ ತೊಡಿಸುವ ಮೂಲಕ ನಿಖಿಲ್ ಕುಮಾರ ಸ್ವಾಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಸಹೋದರಿಯರಾದ ಶೈಲಜಾ, ಅನಸೂಯ ಮತ್ತು ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಲ್ಲ ಶಾಸ್ತ್ರೋಕ್ತವಾಗಿ ಭಾವಿ ವಧು ವರರರು ಪರಸ್ಪರ ಉಂಗುರ ಹಾರ ಬದಲಾಯಿಸಿಕೊಂಡರು. ನಿಶ್ಚಿತಾರ್ಥಕ್ಕೂ ಮುನ್ನ ಮನೆಯಲ್ಲಿ ನಿಖಿಲ್ ತಂದೆ ತಾಯಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಕೋರಿದರು.
ನಿಶ್ಚಿತಾರ್ಥ ಸಂಪೂರ್ಣ ವೈಟ್ ಥೀಮ್ನಲ್ಲಿದ್ದದ್ದು ಪ್ರಮುಖವಾಗಿತ್ತು. ಕಾರ್ಯಕ್ರಮದ ಪ್ರಧಾನ ವೇದಿಕೆಗೆ ಹಾಕಲಾಗಿದ್ದ ಕಾರ್ಪೆಟ್ ನಿಂದ ಹಿಡಿದು ನಿಖಿಲ್-ರೇವತಿ ಉಂಗುರ ಬದಲಾಯಿಸುವ ಮಂಟಪದವರೆಗೂ ಎಲ್ಲವೂ ಶ್ವೇತ ವರ್ಣದಿಂದ ಕೂಡಿತ್ತು. ನಿಶ್ಚಿತಾರ್ಥದ ಮಂಟಪ ಹೂವಿನಿಂದ ಅಲಂಕರಿಸಲಾಗಿದ್ದು, ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಬೆಳೆಯುವ ಬಿಳಿ ಬಣ್ಣದ ಹೂವನ್ನು ತರಿಸ ಅಲಂಕರಿಸಲಾಗಿದೆ.
ಭೂರಿ ಬೋಜನ, ವಿಶೇಷ ಖಾದ್ಯಗಳು
ಈ ಅದ್ದೂರಿ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ ಅತಿಥಿಗಣ್ಯರು ಕುಮಾರಸ್ವಾಮಿ ಹಿತೈಷಿಗಳು ಅಡುಗೆ ಪಟ್ಟಿಗೆ ಮನಸೋತರು. ತರಾವರಿ ಭಕ್ಷ್ಯಗಳನ್ನು ಸೇವಿಸಿ ಬಾಯಿಚಪ್ಪರಿಸಿ ಭಲೇ ಎಂದರು. ನಿಶ್ಚಿತಾರ್ಥದಲ್ಲಿ ವಿಐಪಿ ಮತ್ತು ಸಾಮಾನ್ಯ ಜನ ಎಲ್ಲರಿಗೂ ಒಂದೇ ರೀತಿಯ ಅಡುಗೆಯನ್ನು ಮಾಡಿಸಲಾಗಿದ್ದು, ಕರ್ನಾಟಕ ಶೈಲಿಯ 50 ರೀತಿಯ ಖಾದ್ಯಗಳು ಇಲ್ಲಿದ್ದವು. ವೆಲ್ಕಮ್ ಡ್ರಿಂಕ್ಗೆ ಎಳನೀರು, ಮಜ್ಜಿಗೆ, ಕ್ರೆನ್ಬೆರಿ ಕೂಲರ್, ಹರಭರ ಕೆಬಾಬ್, ವೆಜಿಟಬಲ್ ಸ್ಪ್ರಿಂಗ್ ರೋಲ್ಸ್, ಮಿಕ್ಸ್ಡ್ ವೆಜಿಟಬಲ್ ಸಲಾಡ್, ಚಿಲಿ ಪನೀರ್ ನೀಡಲಾಯಿತು.
ನಂತರ ಚಟ್ಪಟ ಗ್ರೀನ್ ಸಲಾಡ್, ಕೊಸಂಬರಿ, ಚನ್ನಾ ಜೋರ್ ಗರಂ, ಡ್ರೈ ಪ್ರ್ಯೂಟ್ ಮಿಕ್ಸ್ಚರ್, ಮಾವಿನಕಾಯಿ ಉಪ್ಪಿನಕಾಯಿ, ಕರ್ಡ್ ಚಿಲಿ, ಹಪ್ಪಳ, ಸಂಡಿಗೆ, ಚಟ್ನಿ, ಪುದಿನಾ ಚಟ್ನಿ, ಕರ್ಡ್ ರೈಸ್ , ಊಟಕ್ಕೆ ಕ್ಯಾರೆಟ್, ಬೀನ್ಸ್ ಪಲ್ಯ, ಕಾಳು ಫ್ರೈ, ಪೈನಾಪಲ್ ಗೊಜ್ಜು, ಪನ್ನೀರ್ ಪೇಶಾವರಿ, ಥಾಯ್ ವೆಜಿಟಬಲ್ ಗ್ರೀನ್ ಕರಿ, ಕಾರ್ನ್ ಕ್ಯಾಪ್ಸಿಕಂ ಮಸಾಲ, ಪಟೋಟೋ ಪೆಪ್ಪರ್ ಫ್ರೈ ಪುಳಿಯೋಗರೆ, ಜೀರಾ, ಅನ್ನ-ಸಾಂಬಾರ್, ಕೇರಳ ಪರೋಟ. ಊಟದ ನಂತರ ಡ್ರೈ ಫ್ರೂಟ್ ಪಾಯಸ, ಮೈಸೂರು ಪಾಕ್, ಹನಿ ಐಸ್ ಕ್ರೀಮ್, ಮೂಂಗ್ ದಾಲ್ ಹಲ್ವಾ ಇನ್ನೂ ಹಲವು ಇದ್ದವು. ಇದಲ್ಲದೆ ಚಟ್ಪಟ ಗ್ರೀನ್ ಸಲಾಡ್, ಕೊಸಂಬರಿ, ಚನ್ನಾ ಜೋರ್ ಗರಂ, ಡ್ರೈ ಪ್ರ್ಯೂಟ್ ಮಿಕ್ಸ್ಚರ್, ಮಾವಿನಕಾಯಿ ಉಪ್ಪಿನಕಾಯಿ, ಕರ್ಡ್ ಚಿಲಿ, ಹಪ್ಪಳ, ಸಂಡಿಗೆ, ಚಟ್ನಿ, ಪುದಿನಾ ಚಟ್ನಿ, ಕರ್ಡ್ ರೈಸ್ ಕ್ಯಾರೆಟ್, ಬೀನ್ಸ್ ಪಲ್ಯ, ಕಾಳು ಫ್ರೈ, ಪೈನಾಪಲ್ ಗೊಜ್ಜು, ಪನ್ನೀರ್ ಪೇಶಾವರಿ ಜಿಹ್ಯಾ ಚಾಪಲ್ಯ ತಣಿಸಿತು.
ಒಟ್ಟು 6 ಸಾವಿರ ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಬಂಧುಗಳು, ಗಣ್ಯರು, ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ಬಾಳೆ ಎಲೆ ಊಟದ ಆಯೋಜನೆ ಮಾಡಲಾಗಿದೆ. ಕುಮಾರಸ್ವಾಮಿಯವರು ತಮ್ಮ ಪುತ್ರನ ನಿಶ್ಚಿತಾರ್ಥಕ್ಕೆ ಬಂದಂತವರು ಬಾಳೆ ಎಲೆಯಲ್ಲಿ ಊಟ ಮಾಡಬೇಕು ಎಂದು ಆಸೆಪಟ್ಟಿದ್ದರು. ಇದೇ ಕಾರಣಕ್ಕೆ ಬಾಳೆ ಎಲೆಯಲ್ಲಿಯೇ ಊಟ ಬಡಿಸಲಾಗುತ್ತಿದೆ. ಇದರ ಜೊತೆ ಗಣ್ಯರಿಗೆ ಅನುಕೂಲವಾಗಲಿ ಎಂದು ಬಫೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.
ನಿಶ್ಚಿತಾರ್ಥಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ "ತಮ್ಮ ಜೀವನದ ಮೊದಲನೇ ಅಧ್ಯಾಯ ಪ್ರಾರಂಭಿಸುತ್ತಿದ್ದು ಕೃಷ್ಣಪ್ಪ ಹಾಗೂ ತಮ್ಮ ಈ ಎರಡು ಕುಟುಂಬಗಳು ಸೇರಿ ನನ್ನ ನಿಶ್ಚಿತಾರ್ಥವನ್ನು ನಿಗದಿ ಮಾಡಿದ್ದಾರೆ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ಇಬ್ಬರು ಮೊದಲನೇ ಹೆಜ್ಜೆ ಇಡುತ್ತಿದ್ದೇವೆ. ಹಾಗಾಗಿ ರಾಜ್ಯದ ಜನತೆಯ ಆಶೀರ್ವಾದ ಅಗತ್ಯ ಎಂದರು.
Advertisement