ರಮೇಶ್ ಅರವಿಂದ್ ಅವರು ಬಣ್ಣದಲೋಕ ಪ್ರವೇಶಿಸಿ ಮೂರು ದಶಕಗಳಾಗಿದ್ದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ 101ನೇ ಸಿನಿಮಾ ಶಿವಾಜಿ ಸುರತ್ಕಲ್ ಫೆಬ್ರವರಿ 21 ರಂದು ರಿಲೀಸ್ ಈಗಲಿದ್ದು, ವಿಶ್ವಾದ್ಯಂತ ಕೂಡ ಪ್ರದರ್ಶನ ಕಾಣಲಿದೆ.
ಆಸ್ಟ್ರೇಲಿಯಾ ಸೇರಿದಂತೆ ಐದು ಸಿಟಿಗಳಲ್ಲಿ ಫೆಬ್ರವರಿ 22 ರಂದು ಹಾಗೂ ಮಾರ್ಚ್ 8ರಂದು ಲಂಡನ್ ನಲ್ಲಿ ಪ್ರೀಮಿಯರ್ ಶೋ ನಡೆಯಲಿದೆ. ಅಮೆರಿಕಾ, ಕೆನಡಾ ಹಾಗೂ ಸಿಂಗಾಪೂರ್ ಮತ್ತು ಸೌತ್ ಆಫ್ರಿಕಾ ದಲ್ಲಿ ಹಂಚಿಕೆದಾರರ ಜೊತೆ ಚರ್ಚೆ ನಡೆದಿದೆ.
ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದು ಜಯಂತ ಕಾಯ್ಕಿಣಿ ಎರಡು ಹಾಡುಗಳನ್ನು ಬರೆದಿದ್ದಾರೆ.
ಈ ಚಿತ್ರದಲ್ಲಿ ರಮೇಶ್ ಅರವಿಂದ್ ಷೆರ್ಲಾಕ್ ಹೋಮ್ಸ್ ಥರ ಓರ್ವ ಪತ್ತೇದಾರ. ಹೆಸರು ಶಿವಾಜಿ ಸುರತ್ಕಲ್. ಇದೇ ಮೊದಲು ಅವರು ವಿಭಿನ್ನ ಪಾತ್ರ ಮತ್ತು ವಿಶಿಷ್ಟ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕರ ಪ್ರಕಾರ, ಶಿವಾಜಿ ಸುರತ್ಕಲ್ ಬೇರೆಯವರಂತಲ್ಲ. ಅವನ ತನಿಖಾ ವಿಧಾನವೇ ಅಪೂರ್ವ. ಸಾಕ್ಷ್ಯಾಧಾರಗಳನ್ನು ಶೋಧಿಸಿ, ತನ್ನ ಅದ್ಭುತವಾದ ಕಲ್ಪನಾ ಶಕ್ತಿಯಿಂದ ಅಪರಾಧಿಯನ್ನು ಹಿಡಿದು ಹಾಕುವ ಚಾಣಾಕ್ಷ ಆತ.
‘ರಣಗಿರಿಯೆಂಬುದೊಂದು ಚಿಕ್ಕ ಊರು. ಅದರ ಹೆಸರು ಕೇಳಿದ ಪ್ರತಿ ವ್ಯಕ್ತಿಗೂ ನಡುಕ ಹುಟ್ಟುತ್ತದೆ. ಆ ಊರಿನ ಬಗ್ಗೆ ಕೇಳುವ ಕಥೆಗಳು ನೂರಾರು. ಈಗ ಅಲ್ಲಿಗೆ ಶಿವಾಜಿ ಹೋಗಬೇಕು. ಅವನು ಊಹಿಸಲಾರದಷ್ಟು ದೊಡ್ಡ ಸವಾಲುಗಳು ಅಲ್ಲಿ ಎದುರಾಗುತ್ತವೆ.
ಆದರೆ, ಶಿವಾಜಿ ಓರ್ವ ವಿಶೇಷ ಪತ್ತೇದಾರ. ಇಲಾಖೆ ಬಹುವಾಗಿ ಮೆಚ್ಚಿಕೊಂಡಿರುತ್ತದೆ. ಆತನ ರಣಗಿರಿಯಲ್ಲಿ ಎಷ್ಟೇ ಸವಾಲು ಎದುರಾದರೂ ಆತನಿಗೆ ಇಲಾಖೆ ವಹಿಸಿರುವ ಒಂದು ವಿಚಿತ್ರ ಕೇಸಿನ ರಹಸ್ಯ ಭೇದಿಸಬೇಕು. ಆಗ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ’ ಎನ್ನುವುದು ಚಿತ್ರದ ಕತೆ ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.
Advertisement