ಬೆಂಗಳೂರು: ಯಾವುದೇ ಒಂದು ಕೆಲಸದಿಂದ ಈ ಜಗತ್ತಿನ ಪ್ರತಿಯೊಬ್ಬರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆ.
ಇಷ್ಟಕ್ಕೂ ಅವರೇಕೆ ಈ ಮಾತನ್ನಾಡಿದ್ದಾರೆ ಗೊತ್ತಾ? ದೆಹಲಿಯ ನಿರ್ಭಯಾ ಅತ್ಯಾಚಾರಿಗಳನ್ನು ಇದೇ 22ರಂದು ಗಲ್ಲಿಗೇರಿಸುವ ಕಾರ್ಯವನ್ನು ಹ್ಯಾಂಗ್ಮನ್ ಪವನ್ ಜಲ್ಲಾದ್ ಗೆ ಒಪ್ಪಿಸಲಾಗಿದೆ. 57 ವರ್ಷದ ಪವನ್ ಜಲ್ಲಾದ್ ಈ ಬಗ್ಗೆ ಪ್ರತಿಕ್ರಿಯಿಸಿ, 'ನನ್ನ ಮಗಳ ಮದುವೆಗೆ ಹಣ ಹೊಂದಿಸಲು ಇದು ದೇವರೇ ಕೊಟ್ಟಿರುವ ಅವಕಾಶ' ಎಂದು ಹೇಳಿಕೊಂಡಿದ್ದರು.
ಈ ಸುದ್ದಿಗೆ ಸ್ಪಂದಿಸಿದ್ದ ಜಗ್ಗೇಶ್, 'ನಿರ್ಭಯಾ ಸಾವಿಗೆ ಕಾರಣರಾದ ರಕ್ಕಸರನ್ನು ನೀವೇ ಗಲ್ಲಿಗೇರಿಸುವುದಾದರೆ ಮಗಳ ಮದುವೆಗೆ ಒಂದು ಲಕ್ಷ ರೂಪಾಯಿ ನೀಡುತ್ತೇನೆ” ಎಂದು ಹೇಳಿಕೆ ನೀಡಿದ್ದರು. ಹಾಗೂ ಅವರ ಈ ಮಾತಿಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು.
ಹೀಗಾಗಿ ಇಂದು ಟ್ವಿಟರ್ ನಲ್ಲಿ ಮತ್ತೆ ಪ್ರತಿಕ್ರಿಯಿಸಿರುವ ಜಗ್ಗೇಶ್ 'ಒಬ್ಬ ತಂದೆಯಾಗಿ, ಗಂಡನಾಗಿ, ತಾತನಾಗಿ ಅವನ ಭಾವನೆಗೆ ಸ್ಪಂದಸಿದೆ! ಅತ್ಯಾಚಾರ ಕೊಲೆ ಆ ಹೆಣ್ಣುಕುಲದ ಯಾತನೆ ನನ್ನ ರಕ್ತಕುದಿಸಿತು! ದುರುಳರ ಅಂತ್ಯ ಸಮಾಧಾನವಾಯಿತು! ನನ್ನಭಾವನೆ ಅರ್ಥವಾದವರು ಹರಸಿದರು! ಅರ್ಥವಾಗದವರು ಅಣಕಿಸಿದರು! ನನ್ನಭಾವನೆ ದೇವರಿಗೆ ಅರ್ಥವಾದರೆ ಧನ್ಯ! ಲೋಕ ಮೆಚ್ಚಿಸಲು ಲೋಕನಾಥನಿಗೆ ಸಾಧ್ಯವಿಲ್ಲ ಕಲಿಯುಗದಲ್ಲಿ! ನಾನು ನರಮಾನವ! ಎಂದಿದ್ದಾರೆ.
Advertisement