5 ವರ್ಷಗಳ ಹಿಂದೆ ಇದೇ ದಿನ ನಮ್ಮ ರಂಗಿತರಂಗ ನಿಮ್ಮ ರಂಗಿತರಂಗ ಆಗಿತ್ತು, ರಂಗಿತರಂಗವನ್ನು ಯಶಸ್ಸುಗೊಳಿಸಿದ ನಿಮಗೆಲ್ಲರಿಗೂ ವಿಶೇಷ ಧನ್ಯವಾದಗಳು ಎಂದು ನಿರ್ದೇಶಕ ಅನೂಪ್ ಭಂಡಾರಿ ಒಂದು ವಿಶೇಷ ವಿಡಿಯೊವನ್ನು ಮಾಡಿ ಹಾಕಿ ಅದರಲ್ಲಿ ಕನ್ನಡದ ಜನತೆಗೆ ವಿಶೇಷ ಅಭಿನಂದನೆ ತಿಳಿಸಿದ್ದಾರೆ.
ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ಅನೂಪ್ ಭಂಡಾರಿಯವರ ಚೊಚ್ಚಲ ಚಿತ್ರ ರಂಗಿತರಂಗ 2015ರಲ್ಲಿ ತೆರೆಕಂಡು ಕರ್ನಾಟಕ ಮಾತ್ರವಲ್ಲ, ಹೊರರಾಜ್ಯ, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ, ಯುರೋಪ್, ಯುಎಇಗಳಲ್ಲಿ ಯಶಸ್ಸು ಕಂಡಿತ್ತು. ಹೆಚ್ ಕೆ ಪ್ರಕಾಶ್ ಅದರ ನಿರ್ಮಾಪಕರಾಗಿದ್ದರು. ಚಿತ್ರದಲ್ಲಿ ನಾಯಕ, ನಾಯಕಿ ಸೇರಿದಂತೆ ಬಹುತೇಕ ಮಂದಿ ಹೊಸಬರು. ಇಲ್ಲಿ ಎಲ್ಲರ ಪಾತ್ರಗಳು ವಿಶೇಷ ಪ್ರಶಂಸೆಗೆ ಒಳಗಾಗಿದ್ದವು.ಚಿತ್ರದ ತಂತ್ರಜ್ಞಾನ, ಛಾಯಾಗ್ರಹಣ, ಸಂಗೀತ ಹೈಲೈಟ್ ಆದವು.
ಚಿತ್ರಕ್ಕೆ ಆರಂಭದಲ್ಲಿ ಅಷ್ಟೇನು ಪ್ರಚಾರ ಸಿಕ್ಕಿರಲಿಲ್ಲ. ಬಿಡುಗಡೆಯಾದ ನಂತರ ಚಿತ್ರಪ್ರೇಮಿಗಳು ನೋಡಿ ಬಾಯಿಯಿಂದ ಬಾಯಿಗೆ ರಂಗಿತರಂಗ ಉತ್ತಮವಾಗಿದೆ ಎಂದು ಪ್ರಚಾರವಾಗಿ ಥಿಯೇಟರ್ ಗೆ ಹೋಗಿ ನೋಡಿ ಚಿತ್ರ ಗೆದ್ದಿತು. ಇದು ಪ್ರೇಕ್ಷಕರಿಂದಲೇ ಸಾಧ್ಯವಾಯಿತು ಎನ್ನುವ ಅನೂಪ್ ಭಂಡಾರಿ ಮತ್ತೆ ಗೆಲುವಿನ ಬೆನ್ನಟ್ಟಿ ಹೋಗುತ್ತಿದ್ದಾರೆ.
ಮತ್ತೊಂದು ರಂಗಿತರಂಗ ಮೂಲಕ ಕಮ್ ಬ್ಯಾಕ್ ಆಗುತ್ತೇನೆ. ಕಥೆ ಈಗಾಗಲೇ ನನ್ನ ಮನಸ್ಸಿಗೆ ಬಂದಿದ್ದು ನಿಖರವಾಗಿ ಯಾವಾಗ ಮಾಡುತ್ತೇನೆ ಎನ್ನಲು ಸಾಧ್ಯವಿಲ್ಲ, ಪ್ರೇಕ್ಷಕರು ಊಹೆ ಮಾಡುತ್ತಿರಲಿ ಎಂದು ಅನೂಪ್ ಭಂಡಾರಿ ಹೇಳುತ್ತಾರೆ.
ಫಾಂಟಮ್ ಮುಗಿದ ಮೇಲೆ ಮುಂದಿನ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತೇನೆ. ಶಾಲಿನಿ ಆರ್ಟ್ಸ್ ನಡಿ ಮಂಜುನಾಥ ಗೌಡ ಚಿತ್ರವನ್ನು ನಿರ್ಮಿಸಲಿದ್ದಾರೆ. ಇದೇ ಮೊದಲ ಬಾರಿಗೆ ಸುದೀಪ್ ಮತ್ತು ಅನೂಪ್ ಭಂಡಾರಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಜನೀಶ್ ಬಿ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
Advertisement