ಬೆಂಗಳೂರು: ಕನ್ನಡ ಚಿತ್ರರಂಗ ಸಾಕಷ್ಟು ಉತ್ತಮ ಚಿತ್ರಗಳನ್ನು ಕಂಡಿದೆ. ಅದ್ಭುತ ಕಲಾವಿದರು ಪ್ರತಿಭೆಯ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಆದಾಗ್ಯೂ ಡಾ. ರಾಜ್ ಸಿನಿಮಾಗಳೆಂದರೆ ಎಲ್ಲರಿಗೂ ಅದೇನೋ ಪ್ರೀತಿ, ಅಚ್ಚುಮೆಚ್ಚು.
ಇಂದಿನ ಯುವ ಪೀಳಿಗೆಯವರೂ ಸಹ ರಾಜ್ ಚಿತ್ರಗಳನ್ನು ಮೆಚ್ಚುತ್ತಾರೆ. ವಾಹ್ ಎಂದು ಉದ್ಗರಿಸುತ್ತಾರೆ. ಅಂತಹ ಸಿನಿಮಾಗಳು, ಹಾಡುಗಳು ಈಗಿಲ್ಲವಲ್ಲ ಎಂದು ಹಪಹಪಿಸುತ್ತಾರೆ.
ಇಂತಹ ಚಿತ್ರ ರಸಿಕರನ್ನು ತಣಿಸುವುದಕ್ಕಾಗಿ ಡಾ. ರಾಜ್ ಕಾಲದಲ್ಲಿ ತೆರೆ ಕಾಣುತ್ತಿದ್ದಂತಹ ಸಿನಿಮಾಗಳನ್ನು ನಿರ್ಮಿಸುವ ಆಸೆಯಿದೆ ಎಂದು ನಿರ್ಮಾಪಕ ಅಮಿತ್ ಪೂಜಾರಿ ಇಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ರವಿತೇಜ ನಿರ್ದೇಶನದಲ್ಲಿ ಮೂಡಿಬಂದ ‘ಸಾಗುತಾ ದೂರ ದೂರ’ ಎಂಬ ಯಶಸ್ವಿ ಚಿತ್ರವನ್ನು ಖುಷಿ ಕನಸು ಕ್ರಿಯೇಷನ್ಸ್ ಲಾಂಛನದಲ್ಲಿ ಅಮಿತ್ ಪೂಜಾರಿ ನಿರ್ಮಿಸಿದ್ದರು.
ಚಿತ್ರ ಬಿಡುಗಡೆಯಾದ ಮೇಲೆ ತಮ್ಮಷ್ಟಕ್ಕೆ ತಾವಿರುವ ನಿರ್ಮಾಪಕರು ಹೆಚ್ಚು. ಆದರೆ ಅಮಿತ್ ಪೂಜಾರಿ ಅವರು ಹಾಗಲ್ಲ. ಲಾಕ್ ಡೌನ್ ನಂತಹ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇವರ ಈ ಸದ್ಗುಣಕ್ಕೆ ಸಾಗುತಾದೂರದೂರ ಚಿತ್ರದ ನಿರ್ದೇಶಕ ರವಿತೇಜ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಅಮಿತ್ ಪೂಜಾರಿ ಅವರಿಗೆ ಅಣ್ಣಾವ್ರ ಕಾಲದಲ್ಲಿ ಬರುತ್ತಿದ್ದ ಕೌಟುಂಬಿಕ ಹಾಗೂ ಸಾಮಾಜಿಕ ಚಿತ್ರಗಳ ರೀತಿಯಲ್ಲಿ ಈಗ ಚಿತ್ರಗಳನ್ನು ನಿರ್ಮಿಸುವ ಇರಾದೆ ಇದೆಯಂತೆ.
ಇಂತಹ ಹೃದಯವಂತ ನಿರ್ಮಾಪಕನಿಗೆ ಸಾಗುತಾದೂರದೂರ ಚಿತ್ರತಂಡ ಶುಭಾಶಯ ತಿಳಿಸಿದೆ.
Advertisement