ಹತ್ತು ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಾಯಕ ನಟನ ಉದಯವಾಗಿತ್ತು. ಕೆಲವೇ ವರ್ಷಗಳಲ್ಲಿ ಸಿಂಪಲ್ ಸ್ಟಾರ್ ಆಗಿ ಪ್ರಸಿದ್ಧಿಯಾದರು. ಅದಾಗಿ ಹತ್ತು ವರ್ಷ ಕಳೆದಿದೆ, ಈ ಸಂದರ್ಭದಲ್ಲಿ ದಾಟಿಬಂದ ದಿನಗಳನ್ನು ಹಿಂತಿರುಗಿ ನೋಡುತ್ತಾ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾರೆ ರಕ್ಷಿತ್ ಶೆಟ್ಟಿ.
ಜುಲೈ 23ಕ್ಕೆ ನಮ್ ಏರಿಯಾದಲ್ಲೊಂದು ದಿನ ಸಿನಿಮಾಕ್ಕೆ 10 ವರ್ಷವಾಗಿದೆ, ನನ್ನ ಸಿನೆಮಾ ವೃತ್ತಿಗೆ, ಚಿತ್ರ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಚಿತ್ರ. ಇಷ್ಟು ವರ್ಷಗಳು ಕಳೆದುಹೋಯಿತಾ ಎಂದು ಅಚ್ಚರಿಯಾಗುತ್ತಿದೆ. ನಿನ್ನೆ, ಮೊನ್ನೆಯಂತೆ ಅನಿಸುತ್ತಿದೆ. ನಮ್ಮ ಚಿತ್ರ ಬಿಡುಗಡೆ ದಿನ ಗಾಂಧಿನಗರದಲ್ಲಿ ಸುತ್ತಾಡುತ್ತಿದ್ದೆವು ಎಂದು ನೆನಪಿಸಿಕೊಳ್ಳುವ ರಕ್ಷಿತ್ ಶೆಟ್ಟಿಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯದಾಗಲಿದೆ ಎಂದು ನಂಬುತ್ತೇನೆ ಎನ್ನುತ್ತಾರೆ.
ನಮ್ ಏರಿಯಾದಲ್ಲಿ ಒಂದು ದಿನ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕರಾವಳಿ ಹುಡುಗ ರಕ್ಷಿತ್ ಶೆಟ್ಟಿ ನಂತರ ನಿರ್ದೇಶನದ ಮೇಲಿನ ಅತಿ ಇಚ್ಚೆಯಿಂದ ಉಳಿದವರು ಕಂಡಂತೆ ಚಿತ್ರ ತಯಾರಿಸಿದರು. ಚಿತ್ರ ಗೆಲ್ಲದಿದ್ದರೂ ಕೂಡ ಸಾಕಷ್ಟು ಹೆಸರು ತಂದುಕೊಟ್ಟಿತು. ನಂತರ ಪರಂವಾಹ್ ಸ್ಟುಡಿಯೊ ಸ್ಥಾಪನೆ ಮೂಲಕ ನಿರ್ಮಾಣದ ಹೊಣೆಯನ್ನು ಕೂಡ ಹೊತ್ತರು.
ಈ ಸಂದರ್ಭದಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ, ಈ ಹತ್ತು ವರ್ಷಗಳು ಕಳೆದಿರುವ ಸಂದರ್ಭದಲ್ಲಿ ನಾನು ಇದೊಂದು ಭಾವನಾತ್ಮಕ ಅನುಭವ ಎಂದು ಹೇಳಲು ಇಷ್ಟಪಡುತ್ತೇನೆ. ಅಭಿಮಾನಿಗಳು, ಸ್ನೇಹಿತರು, ಚಿತ್ರೋದ್ಯಮದ ಒಳಗೆ ಮತ್ತು ಹೊರಗಿನಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ನಾನೀಗ ಉತ್ತಮ ಸ್ಥಾನದಲ್ಲಿದ್ದೇನೆ ಅನಿಸುತ್ತಿದೆ.ನನ್ನ ಜೀವನದಲ್ಲಿ ಆದ ಕೆಲವು ಸೋಲುಗಳು ಕಲಿಕೆಗೆ ಸಹಾಯವಾದವು, ಪ್ರತಿ ಯಶಸ್ಸು ಕೂಡ ಉತ್ತೇಜನ ನೀಡಿತು, ಸೋಲು-ಗೆಲುವು ಎರಡೂ ಸಿಕ್ಕಿಯೇ ಇಂದು ಈ ಸ್ಥಾನ, ಮನಸ್ಥಿತಿಗೆ ಬಂದಿದೆ. ನನಗೆ ಸಾಕಷ್ಟು ಅವಕಾಶಗಳು ಸಹ ಸಿಕ್ಕಿದೆ. ಸೋಲು-ಗೆಲುವು ಎರಡನ್ನೂ ಸ್ವೀಕರಿಸಿದ್ದೇನೆ ಎಂದರು.
Advertisement