’ಬದಲಾಗು ನೀನು, ಬದಲಾಯಿಸು ನೀನು’ ದೃಶ್ಯರೂಪಕ: ಸಿಎಂ ಯಡಿಯೂರಪ್ಪರಿಂದ ಬಿಡುಗಡೆ

ಕೊರೋನ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಚಿತ್ರರಂಗ ಹಾಗು ಕ್ರೀಡಾ ರಂಗದ ಖ್ಯಾತನಾಮರು ಪಾಲ್ಗೊಂಡಿರುವ ದೃಶ್ಯರೂಪಕ ’ಬದಲಾಗು ನೀನು, ಬದಲಾಯಿಸು ನೀನು’ #MYHERO ವನ್ನು  ಮುಖ್ಯಮಂತ್ರಿ ಯಡಿಯೂರಪ್ಪನವರು ಲೋಕಾರ್ಪಣೆ ಮಾಡಿದರು.
ದೃಶ್ಯ ರೂಪಕ ಬಿಡುಗಡೆ ಮಾಡಿದ ಸಿಎಂ
ದೃಶ್ಯ ರೂಪಕ ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು: ಕೊರೋನ ವಿರುದ್ಧದ ಹೋರಾಟದಲ್ಲಿ ಹಲವು ವಿಶಿಷ್ಟ ಪ್ರಯತ್ನಗಳನ್ನು ನಡೆಸಿರುವ ಕರ್ನಾಟಕ ಸರ್ಕಾರ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ. ಕೊರೋನ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಚಿತ್ರರಂಗ ಹಾಗು ಕ್ರೀಡಾ ರಂಗದ ಖ್ಯಾತನಾಮರು ಪಾಲ್ಗೊಂಡಿರುವ ದೃಶ್ಯರೂಪಕ ’ಬದಲಾಗು ನೀನು, ಬದಲಾಯಿಸು ನೀನು’ #MYHERO ವನ್ನು  ಮುಖ್ಯಮಂತ್ರಿ ಯಡಿಯೂರಪ್ಪನವರು ಲೋಕಾರ್ಪಣೆ ಮಾಡಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯ ಈ ಪ್ರಯತ್ನಕ್ಕೆ ಮಾನ್ಯ ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ದೃಶ್ಯರೂಪಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಸುಧಾಕರ್ ಅವರು, ಇದು ವೈದ್ಯಕೀಯ ಶಿಕ್ಷಣ ಇಲಾಖೆಯ ವಿನೂತನ ಪ್ರಯತ್ನವಾಗಿದೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘*ಬದಲಾಗು ನೀನು, ಬದಲಾಯಿಸು ನೀನು*’ ಎಂಬ ಸುಂದರ ದೃಶ್ಯರೂಪಕವೊಂದನ್ನು ರೂಪಿಸಿದ್ದೇವೆ. 

ಚಲನಚಿತ್ರ ಕಲಾವಿದರು, ಸಂಗೀತ ನಿರ್ದೇಶಕರು, ಕ್ರೀಡಾ ತಾರೆಯರು ದನಿಯಾಗಿರುವ ಈ ದೃಶ್ಯರೂಪಕದ ಪರಿಕಲ್ಪನೆ ನಾನು ಸ್ವಯಂ-ಕ್ವಾರಂಟೈನ್’ಗೆ ಒಳಗಾಗಿದ್ದಾಗ ನನ್ನಲ್ಲಿ ಮೂಡಿತ್ತು. ಇಡೀ ವಿಶ್ವವೇ ಕೋವಿಡ್ ಸಂಕಷ್ಟಕ್ಕೆ ಒಳಗಾಗಿರುವ ಸಮಯದಲ್ಲಿ ರಾಜ್ಯದ ಜನರ ಸೇವೆ ಮಾಡುವ ಸದವಕಾಶ ನನಗೆ ಒದಗಿ ಬಂದಿತು. ಸರ್ಕಾರ ತೆಗೆದುಕೊಳ್ಳುತ್ತಿರುವ ಅಪಾರ ಮುಂಜಾಗ್ರತಾ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಕೆಲಸ ಪ್ರಮುಖವಾಗಿ ಆಗಬೇಕಿದೆ ಎಂಬ ಯೋಚನೆ
ನನಗೆ ಬಂದಿತು. ಅದನ್ನು ಈಗ ಕಾರ್ಯರೂಪಕ್ಕೆ ತಂದಿದ್ದೇವೆ ಎಂದು ಹೇಳಿದರು.

ಈ ಕಾರ್ಯಕ್ಕಾಗಿ ಚಲನಚಿತ್ರ ಹಾಗೂ ಕ್ರೀಡಾ ರಂಗದ ಖ್ಯಾತನಾಮರನ್ನು ಸಂಪರ್ಕಿಸಿದಾಗ ಅವರೆಲ್ಲಾ ಕೂಡಲೆ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ, ಈ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಕೊರೋನ ಕುರಿತಾಗಿ ಹಲವು ಉಪಯುಕ್ತ ಸಲಹೆಗಳನ್ನು ಕೂಡ ನೀಡಿದ್ದಾರೆ. ಇದಕ್ಕಾಗಿ ಸರ್ಕಾರದ ಪರವಾಗಿ ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.

ಕೊರೊನಾ ವೈರಾಣುವನ್ನು ಹಿಮ್ಮೆಟ್ಟಿಸುವ ಸಂಕಲ್ಪ ಮಾಡಲು ನಾಡಿನ ಜನತೆಗೆ ಈ ಸಾಧಕರ ಸಂದೇಶ ಉಪಯುಕ್ತವಾಗಲಿ ಎಂದು ಆಶಿಸುತ್ತೇನೆ. ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ನಾಗರಿಕರ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಕುರಿತಂತೆ ಕಲಾವಿದರು ಮನೋಜ್ಞ ಸಂದೇಶಗಳನ್ನು ನೀಡಿದ್ದಾರೆ. ಅದರಲ್ಲಿಯೂ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ನಾಗರಿಕರು, ವೈದ್ಯರು, ಆರೋಗ್ಯ ಕಾರ್ಯಕರ್ತರ ಬಗ್ಗೆ ಸರ್ಕಾರ ಹಾಗೂ ಸಮುದಾಯ ಕೃತಜ್ಞವಾಗಿದೆ ಎಂಬುದನ್ನು ಈ ದೃಶ್ಯರೂಪಕ ಅನಾವರಣಗೊಳಿಸಲಿದೆ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com