ಅದೊಂದು ಕಾಲವಿತ್ತು ಟಿವಿಯಲ್ಲಿ "ರಾಮಾಯಣ" ಧಾರಾವಾಹಿ ಪ್ರಸಾರವಾಗುವಾಗ ದೇಶದ ಹಳ್ಳಿಗಳು, ನಗರಗಳ ಬೀದಿ ಬೀದಿಗಳು ಬಂದಾದಂತೆ ಇರುತ್ತಿದ್ದವು. ಜನರೆಲ್ಲಾ ಟಿವಿ ಮುಂದೆ ಕುಳಿತು ಧಾರಾವಾಹಿ ವೀಕ್ಷಣೆ ಮಾಡುತ್ತಿದ್ದರು.ಅಂದಿನಿಂದ ಇಂದಿನವರೆಗೂ ರಮಾನಂದ್ ಸಾಗರ್ ನಿರ್ದೇಶನದ "ರಾಮಾಯಣ" ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಇದೀಗ ಕೊರೋನಾವೈರಸ್ ಕಾರಣದಿಂದ ದೇಶಾದ್ಯಂತೆ ಲಾಕ್ ಡೌನ್ ಘೋಷಣೆಯಾಗಿದ್ದು ಜನರೆಲ್ಲಾ ಮನೆಯಲ್ಲೇ ಉಳಿಯುವಂತಾಗಿದೆ. ಈ ಸಮಯದಲ್ಲಿ "ರಾಮಾಯಣ" ಧಾರಾವಾಹಿಯನ್ನು ಮತ್ತೆ ಟಿವಿಯಲ್ಲಿ ಪ್ರಸಾರ ಮಾಡಬೇಕು. ಈಗಿನ ಪೀಳಿಗೆ ಧಾರಾವಾಹಿಯನ್ನು ನೋಡುವ ಮೂಲಕ ಭಾರತೀಯ ಪರಂಪರೆಯ ಅರಿವು ಮೂಡಿಸಿಕೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.
"ರಾಮಾಯಣ" ಧಾರಾವಾಹಿ ಮರುಪ್ರಸಾರ ಮಾಡುವಂತೆ ಜನರಿಂದ ಸಾಕಷ್ಟು ಒತ್ತಡಗಳು ಬರುತ್ತಿರುವ ಕಾರಣ ಇದೀಗ ದೂರದರ್ಶನದಲ್ಲಿ ಧಾರಾವಾಗಿ ಮರುಪ್ರಸಾರ ಆಗುವುದು ನಿಶ್ಚಿತವಾಗಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿ ಟಿವಿಯಲ್ಲಿ ಧಾರಾವಾಹಿ ಮರುಪ್ರಸಾರವಾಗುವ ಬಗೆಗೆ ತಿಳಿಸಿದ್ದಾರೆ.
ಸಚಿವ ಜಾವಡೇಕರ್ ಶುಕ್ರವಾರ ಈ ಕುರಿತು ಟ್ವೀಟ್ ಮಾಡಿದ್ದು "ಸಾರ್ವಜನಿಕ ಬೇಡಿಕೆಯ ಮೇರೆಗೆ, ನಾಳೆ, ಮಾರ್ಚ್ 28ರಿಂದ ಡಿಡಿ ನ್ಯಾಷನಲ್ನಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ಬೆಳಿಗ್ಗೆ 9 ರಿಂದ 10 ರವರೆಗೆ ಒಂದು ಎಪಿಸೋಡ್ ಹಾಗೂ ರಾತ್ರಿ 9 ರಿಂದ 10 ರವರೆಗೆ ಮತ್ತೊಂದು ಎಪಿಸೋಡ್ ನಂತೆ ಪ್ರಸಾರ ಮಾಡಲಾಗುವುದು ಎಂದು ಘೋಷಿಸಲು ಸಂತೋಷವಾಗಿದೆ" ಎಂದಿದ್ದಾರೆ.
1987-88ರ ಅವಧಿಯಲ್ಲಿ ಪ್ರಸಾರ ಕಂಡಿದ್ದ "ರಾಮಾಯಣ"ಧಾರಾವಾಹಿಗೆ ರಮಾನಂದ್ ಸಾಗರ್ ನಿರ್ದೇಶನ ಇದ್ದು ಅರುಣ್ ಗೋವಿಲ್ ರಾಮನಾಗಿ, ದೀಪಿಕಾ ಸೀತೆಯಾಗಿ, ಸುನಿಲ್ ಲಹರಿ, ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಆಗಿದ್ದು ಈ ಸಮಯದಲ್ಲಿ ಧಾರಾವಾಹಿ ಮರುಪ್ರಸಾರ ಕಾಣುತ್ತಿರುವುದು ಎಲ್ಲರಲ್ಲೂ ಸಂತಸ ಮೂಡಿಸಿದೆ.
Advertisement