ಬೆಂಗಳೂರು: ಅಪ್ಪಾಜಿ ಅಂಬರೀಷ್ ರವರನ್ನು ದೈಹಿಕವಾಗಿ ಅಗಲಿ ಎರಡು ವರ್ಷಗಳಾಗಿವೆ. ಆದರೆ ನಮ್ಮ ಹೃದಯದಲ್ಲಿ ಅವರು ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯುತ್ತಾರೆ ಎಂದು ಕನ್ನಡದ ಖ್ಯಾತ ನಾಯಕ ನಟ ದರ್ಶನ್ ಹೇಳಿದ್ದಾರೆ.
ಅಂಬರೀಷ್ ಅವರ 2ನೇ ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಸಮಾಧಿಗೆ ಸುಮಲತಾ ಅಂಬರೀಷ್ , ಪುತ್ರ ಅಂಬರೀಷ್ ಜೊತೆಗೆ ಬಂದು ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಅಂಬರೀಷ್ ಅವರು ಹಿರಿಯ ಮಾರ್ಗದರ್ಶಕರಂತೆ ನಮಗೆಲ್ಲರೂ ಇದ್ದರು. ನಾವು ಏನೇ ತಪ್ಪುಗಳನ್ನು ಮಾಡಿದರೂ ಬೈದು, ತಿದ್ದಿ ತೀಡುತ್ತಿದ್ದರು. ಅವರ ಪ್ರೀತಿಯ ಬೈಗುಳವನ್ನು ಇಂದು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಇಂದು ನಾಡಿನಾದ್ಯಂತ ಕೊರೋನಾದಿಂದಾಗಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ಚೆನ್ನಾಗಿ ಕೆಲಸ ಮಾಡಿ ಮುನ್ನಡೆಯಬೇಕಾಗಿದ್ದು ನಮ್ಮ ಕರ್ತವ್ಯ ಎಂದರು.
ಕನ್ನಡ ಚಿತ್ರರಂಗದವರಿಗೆ ಹಿರಿಯಣ್ಣನಂತೆ, ಯಜಮಾನನ ಸ್ಥಾನದಲ್ಲಿ ನಿಂತಿದ್ದ ಖ್ಯಾತ ಹಿರಿಯ ನಟ ಅಂಬರೀಷ್ ಅಗಲಿ ಇಂದಿಗೆ ಎರಡು ವರ್ಷ. 2018ರ ನವೆಂಬರ್ 24ರಂದು ಅವರು ಅಗಲಿದ್ದರು.
Advertisement