ಲಾಕ್ ಡೌನ್ ಕಾರಣದಿಂದಾಗಿ ಸುದೀರ್ಘ ರಜೆಯಲ್ಲಿದ್ದ ನಟಿ ಪಾವನ ಗೌಡ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಮತ್ತೆ ಸಿನಿಮಾ ಕೆಲಸಕ್ಕೆ ಹಾಜರಾಗಿರುವ ಪಾವನಗೌಡ ಹಲವು ಪ್ರಾಜೆಕ್ಟ್ ಗಳಿಗಾಗಿ ನಿರ್ದೇಶಕರ ಜೊತೆ ಚರ್ಚಿಸಿದ್ದಾರೆ. ಜೊತೆಗೆ ರುದ್ರಿ ಸಿನಿಮಾ ತಂಡದ ಸೇರಿ ಮತ್ತೊಂದು ಚಿತ್ರಕ್ಕೆ ಕೈ ಜೋಡಿಸಿದ್ದಾರೆ.
ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಿನಿಮಾ ರಿಲೀಸ್ ಗೂ ಮುನ್ನ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ನಿರ್ದೇಶಕ ಬಡಿಗೇರ್ ದೇವೇಂದ್ರ ಮತ್ತೊಂದು ಆಸಕ್ತಿ ದಾಯಕ ಸಿನಿಮಾ ಮಾಡಲು ಮುಂದಾಗಿದ್ದಾರೆ.
ರುದ್ರಿ ನಾನು ಮಾಡಿದ ಅತ್ಯುತ್ತಮ ಚಿತ್ರ, ಪ್ರೇಕ್ಷಕರು ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ, ಸದ್ಯ ಆನ್ ಲೈನ್ ನಲ್ಲಿ ರಿಲೀಸ್ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸುತ್ತಿದೆ, ಅದೇ ರೀತಿಯ ಸಿನಿಮಾ ಕಥೆ ಇಟ್ಟುಕೊಂಡು ನಿರ್ದೇಶಕರು ನನ್ನ ಬಳಿ ಬಂದರು, ಹೀಗಾಗಿ ನಾನು ಕಣ್ಮುಚ್ಚಿಕೊಂಡು ಒಪ್ಪಿಕೊಂಡೆ, ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮಹಿಳೆಯರ ನಿರ್ಲಕ್ಷ್ಯದ ಬಗ್ಗೆ ಸಿನಿಮಾ ಕತೆ ಹೆಣೆಯಲಾಗಿದೆ ಎಂದು ಪಾವನ ತಿಳಿಸಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಸಿನಿಮಾ ಕಥೆಗಾಗಿ ಸಾಕಷ್ಟು ತಾಲೀಮು ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಸಿನಿಮಾ ತಂಡ ಪೋಸ್ಟರ್ ರಿಲೀಸ್ ಮಾಡಲಿದೆ, ಸಂದರ್ಭದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ ಎಂದು ಪಾವನ ಹೇಳಿದ್ದಾರೆ. ರುದ್ರಿ ಹೊರತು ಪಡಿಸಿ ಪಾವನ ದಿ ಮೈಸೂರು ಡೈರೀಸ್, ತೂತು ಮಡಿಕೆ, ಕಲಿ ವೀರ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
Advertisement