ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ಸಂಗೀತ ನಿರ್ದೇಶಕ ರಾಜನ್ ವಿಧಿವಶ

ಕನ್ನಡ ಸಿನಿಮಾ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರಾಜನ್ ವಿಧಿವಶರಾಗಿದ್ದಾರೆ. ರಾಜನ್- ನಾಗೇಂದ್ರ ಸಹೋದರರ ಪೈಕಿ ರಾಜನ್ ಹಿರಿಯರಾಗಿದ್ದರು.
ರಾಜನ್
ರಾಜನ್

ಬೆಂಗಳೂರು: ಕನ್ನಡ ಸಿನಿಮಾ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರಾಜನ್ ವಿಧಿವಶರಾಗಿದ್ದಾರೆ. 

ರಾಜನ್- ನಾಗೇಂದ್ರ ಸಹೋದರರ ಪೈಕಿ ರಾಜನ್ ಹಿರಿಯರಾಗಿದ್ದರು. 87 ವರ್ಷದ ರಾಜನ್ ಅವರು ಆರೋಗ್ಯದಿಂದ ಇದ್ದರು, ಆದರೆ ಶನಿವಾರ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಿತು. ಭಾನುವಾರ ರಾತ್ರಿ 11 ಗಂಟೆಗೆ ವಿಧಿವಶರಾದರು ಎಂದು ರಾಜನ್ ಪುತ್ರ ಅನಂತ್ ಕುಮಾರ್ ತಿಳಿಸಿದ್ದಾರೆ.

ರಾಜನ್ ಅವರ ಹಿರಿಯ ಸಹೋದರ ನಾಗೇಂದ್ರ 2000ನೇ ಇಸವಿಯಲ್ಲಿ ನಿಧನರಾಗಿದ್ದರು. ರಾಜನ್ ಮತ್ತು ನಾಗೇಂದ್ರ ಅವರು 1950, 1960, 1970, 1980 ಮತ್ತು 1990ರ ದಶಕದ ಮೆಲೋಡಿಕಿಂಗ್ ಎನಿಸಿಕೊಂಡಿದ್ದ ಸಂಗೀತ ಸಂಯೋಜಕರು. ಇವರಿಬ್ಬರು ಸುಮಾರು 400 ಅಧಿಕ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿದ್ದ ಈ ಜೋಡಿ ಕನ್ನಡದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

ಮೈಸೂರಿನ ಶಿವರಾಂಪೇಟೆಯ ಮಧ್ಯಮ ವರ್ಗದ ಸಂಗೀತ ಕುಟುಂಬದಲ್ಲಿ ರಾಜನ್ ಮತ್ತು ನಾಗೇಂದ್ರ ಜನಿಸಿದರು. ಅವರ ತಂದೆ ರಾಜಪ್ಪ ಹಾರ್ಮೋನಿಯಂ ಮತ್ತು ಕೊಳಲು ವಾದಕರಾಗಿದ್ದರು. ಮೂಕ ಚಲನಚಿತ್ರಗಳಿಗೆ ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದರು.

1952 ರಲ್ಲಿ ಸೌಭಾಗ್ ಲಕ್ಷ್ಮಿ ಸಿನಿಮಾ ಮೂಲಕ ರಾಜನ್ -ನಾಗೇಂದ್ರ ಸ್ವತಂತ್ರ್ಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರು.

ನ್ಯಾಯವೇ ದೇವರು, ಗಂಧದ ಗುಡಿ, ದೇವರ ಗುಡಿ, ಭಾಗ್ಯವಂತರು, ಎರಡು ಕನಸು, ನಾ ನಿನ್ನಾ ಮರೆಯಲಾರೆ, ನಾ ನಿನ್ನಾ ಬಿಡಲಾರೆ, ಹೊಂಬಿಸಿಲು, ಬಯಲು ದಾರಿ, ಪಾವನಾ ಗಂಗಾ, ಗಿರಿ ಕನ್ಯೆ ಅಂತಹ ಚಿತ್ರಗಳಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು.

ಪ್ರಸಿದ್ದ ಸಾಹಿತಿಗಳಾದ ಉದಯ್ ಶಂಕರ್, ಹುಣಸೂರು ಕೃಷ್ಣಮೂರ್ತಿ, ವಿಜಯ ನಾರಸಿಂಹ, ಗೀತಪ್ರಿಯ, ಗಾಯಕರಾದ ಘಂಟಶಾಲಾ, ವಾಣಿ ಜಯರಾಮ್, ಪಿ.ಬಿ ಶ್ರೀನಿವಾಸ್, ಚಿತ್ರ, ಕಿಶೋರ್ ಕುಮಾರ್, ಎಸ್ ಬಿ ಬಾಲಸುಬ್ರಮಣ್ಯಂ, ಜಾನಕಿ,ಎಲ್ ಆರ್ ಈಶ್ವರಿ ಮುಂತಾದವರೊಂದಿಗೆ ಕೆಲಸ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com